ಪೌರತ್ವ ಪ್ರತಿಭಟನೆಗಳು ವ್ಯವಸ್ಥಿತ ಷಡ್ಯಂತ್ರ: ಪ್ರಧಾನಿ ಮೋದಿ
Team Udayavani, Feb 4, 2020, 6:00 AM IST
ಹೊಸದಿಲ್ಲಿ:”ಪೌರತ್ವ ಕಾಯ್ದೆ ವಿರೋಧಿಸಿ ಸೀಲಾಂಪುರ, ಜಾಮಿಯಾನಗರ ಮತ್ತು ಶಹೀನ್ಬಾಘನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಕಾಕತಾಳೀಯವಲ್ಲ, ಅವು ರಾಷ್ಟ್ರೀಯ ಸಾಮರಸ್ಯವನ್ನು ಕೆಡಿಸಲು ನಡೆಸಲಾದ ವ್ಯವಸ್ಥಿತ ರಾಜಕೀಯ ಷಡ್ಯಂತ್ರ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಫೆ. 8ರ ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಪೂರ್ವ ದಿಲ್ಲಿಯಲ್ಲಿ ಬೃಹತ್ ಪ್ರಚಾರ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, ಪ್ರತಿಭಟನೆಗಳಿಗೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಆಕಸ್ಮಿಕವಲ್ಲ, ಪ್ರಾಯೋಗಿಕ: ಭಾಷಣದಲ್ಲಿ ತಮ್ಮ ಸರಕಾರದ ಯೋಜನೆಗಳು ಹಾಗೂ ದಿಲ್ಲಿಗೆ ನೀಡಲಾದ ಆಶ್ವಾಸನೆಗಳ ಕುರಿತು ಪ್ರಸ್ತಾಪಿಸಿದ ಮೋದಿ, ಅನಂತರ ಪೌರತ್ವ ಕಾಯ್ದೆಗೆ ಸಂಬಂಧಿಸಿ ನಡೆಯುತ್ತಿರುವ ಪ್ರ ತಿಭಟನೆಗಳ ಕುರಿತು ಆಕ್ರೋಶ ಹೊರಹಾಕಿದ್ದಾರೆ. “ಇವು ಆಕಸ್ಮಿಕವಲ್ಲ, ಪ್ರಾಯೋಗಿಕ’ ಎಂದ ಅವರು, “ದಿಲ್ಲಿಯಲ್ಲಿ ನಿರಂಕುಶ ಪ್ರಭುತ್ವವನ್ನು ತಡೆಯಬೇಕೆಂದರೆ ಬಿಜೆಪಿಗೆ ಮತ ಹಾಕಿ’ ಎಂದು ಕರೆ ನೀಡಿದರು.
ಕಾಂಗ್ರೆಸ್ ಮತ್ತು ಆಪ್ ಸಂವಿಧಾನ ಹಾಗೂ ತ್ರಿವರ್ಣ ಧ್ವಜಗಳನ್ನು ಹಿಡಿದು ಕೊಂಡು ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿವೆ. ಆದರೆ, ನೈಜ ಸಂಚಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದೇ ಅವರ ಉದ್ದೇಶ. ಈಗಾಗಲೇ ಒಂದು ರಸ್ತೆ ಬಂದ್ ಆಗಿ ನೀವೆಲ್ಲರೂ ಕಷ್ಟ ಅನುಭವಿಸುತ್ತಿದ್ದೀರಿ. ಇನ್ನು ಸಂಚುಕೋರರ ಶಕ್ತಿ ಹೆಚ್ಚಾದರೆ, ಮತ್ತೂಂದು ರಸ್ತೆ ಬಂದ್ ಆಗುತ್ತದೆ.
ಇದನ್ನು ತಡೆಯಲು ದಿಲ್ಲಿಯ ಜನತೆಗೆ ಮಾತ್ರ ಸಾಧ್ಯ. ಬಿಜೆಪಿಗೆ ನೀಡುವ ಪ್ರತಿ ಮತವೂ ಇದನ್ನು ತಡೆಯಲು ನೆರವಾಗಲಿದೆ ಎಂದಿದ್ದಾರೆ ಮೋದಿ.
ಕೇಜ್ರಿವಾಲ್ ಒಬ್ಬ ಭಯೋತ್ಪಾದಕ: ಈ ನಡುವೆ, ದಿಲ್ಲಿ ಸಿಎಂ ಕೇಜ್ರಿವಾಲ್ ಅವರೊಬ್ಬ ಭಯೋತ್ಪಾದಕ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಜತೆಗೆ, ಅದಕ್ಕೆ ಸಾಕಷ್ಟು ಪುರಾವೆ ಗಳೂ ಸಿಕ್ಕಿವೆ ಎಂದಿದ್ದಾರೆ. “ಕೇಜ್ರಿವಾಲ್ ತಮ್ಮನ್ನು ತಾವು ನಿರಂಕುಶವಾದಿ ಎಂದು ಕರೆ ದಿದ್ದಾರೆ.
ನಿರಂಕುಶವಾದಿ ಮತ್ತು ಭಯೋ ತ್ಪಾದಕನ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲ’ ಎಂದು ಜಾವಡೇಕರ್ ಹೇಳಿದ್ದಾರೆ. ಜತೆಗೆ, ಕೇಜ್ರಿವಾಲ್ ಅವರು ಪಂಜಾಬ್ ಅಸೆಂಬ್ಲಿ ಚುನಾವಣೆ ವೇಳೆ ಖಲಿಸ್ತಾನಿ ಕಮಾಂಡೋ ಪಡೆಯ ಮುಖ್ಯಸ್ಥ ಗುರಿಂದರ್ ಸಿಂಗ್ನ ಮನೆಯಲ್ಲಿ ರಾತ್ರಿ ಕಳೆದಿದ್ದರು.
ಅದು ಉಗ್ರವಾದಿಯ ಮನೆ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೇ ಎಂದೂ ಜಾವಡೇಕರ್ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಕೇಜ್ರಿವಾಲ್ರನ್ನು ಭಯೋ ತ್ಪಾದಕ ಎಂದು ಕರೆದಿದ್ದು, ಅವರಿಗೆ ಆಯೋಗ ನೋಟಿಸ್ ಜಾರಿ ಮಾಡಿತ್ತು.
ಹಾಗಿದ್ದರೆ ಬಂಧಿಸಿ: ಜಾಬ್ಡೇಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್, ಕೇಜ್ರಿವಾಲ್ ಅವರು ಭಯೋತ್ಪಾದಕನೇ ಆಗಿದ್ದಲ್ಲಿ, ಅವರನ್ನು ಬಂಧಿಸಲಿ. ಇದು ನಾನು ಬಿಜೆಪಿಗೆ ಹಾಕುತ್ತಿರುವ ಸವಾಲು’ ಎಂದಿದ್ದಾರೆ.
ಮತ್ತೆ ಆಪ್ಗೆ ಜಯ?
ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಟೈಮ್ಸ್ ನೌ ಹಾಗೂ ಐಪಿಎಸ್ಒಎಸ್ ಸಂಸ್ಥೆಯು ಜನರ ಮೂಡ್ ಆಧರಿಸಿ ಜನಾಭಿ ಪ್ರಾಯ ಸಂಗ್ರಹಿಸಿದೆ. ಅದರ ಪ್ರಕಾರ, ಆಮ್ ಆದ್ಮಿ ಪಕ್ಷ ದಿಲ್ಲಿಯಲ್ಲಿ ಮತ್ತೆ ಅಧಿಕಾರಕ್ಕೇರಲಿದೆ. ಆಪ್ 54ರಿಂದ 60 ಸೀಟುಗಳಲ್ಲಿ ಜಯ ಸಾಧಿಸಲಿದ್ದು, ಬಿಜೆಪಿ 10ರಿಂದ 14 ಕ್ಷೇತ್ರಗಳಿಗೆ ತೃಪ್ತಿ ಪಡಲಿದೆ. ಕಾಂಗ್ರೆಸ್ 3ನೇ ಸ್ಥಾನಕ್ಕಿಳಿ ಯಲಿದೆ. ಇದೇ ವೇಳೆ, ಶೇ.51ರಷ್ಟು ಮಂದಿ ಪೌರತ್ವ ಕಾಯ್ದೆ ವಿರುದ್ಧ ಶಹೀನ್ ಬಾಘ…ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಸರಿಯಲ್ಲ ಎಂದರೆ, ಶೇ.25 ಮಂದಿ ಅದನ್ನು ಸಮರ್ಥಿಸಿಕೊಂಡಿದ್ದಾರೆ.