ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ: ಕಾನ್ಪುರ ಉದ್ರಿಕ್ತ
Team Udayavani, Jun 3, 2022, 10:33 PM IST
ಕಾನ್ಪುರ: ಉತ್ತರ ಪ್ರದೇಶದ ಬಿಜೆಪಿಯ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಹೇಳಲಾಗಿದ್ದು ಈ ವಿಚಾರ ಕಾನ್ಪುರದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಿದೆ.
ಟಿವಿಯಲ್ಲಿ ಮೂಡಿಬಂದ ಚರ್ಚೆಯೊಂದರಲ್ಲಿ, ನೂಪುರ್ರವರ ಹೇಳಿಕೆಯನ್ನು ಖಂಡಿಸಿದ ಸ್ಥಳೀಯ ಮುಸ್ಲಿಂ ಸಂಘಟನೆಯೊಂದು, ಕಾನ್ಪುರದ ಅತಿ ದೊಡ್ಡ ಸಗಟು ವ್ಯಾಪಾರ ಮಾರುಕಟ್ಟೆಯಾದ ಪರೇಡ್ ಮಾರ್ಕೆಟನ್ನು ಮುಚ್ಚುವಂತೆ ಕರೆ ನೀಡಿತ್ತು.
ಇದರ ನಡುವೆಯೇ, ಪರೇಡ್ ಚೌಕ್ನಲ್ಲಿ ಎರಡು ಗುಂಪುಗಳು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇದೇ ವೇಳೆ, ಕಲ್ಲುತೂರಾಟದಲ್ಲಿ ಭಾಗಿಯಾಗಿದ್ದ ಸುಮಾರು 12 ಜನರನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎರಡು ಕೇಸ್
ನೂಪುರ್ ಶರ್ಮಾ ಅವರ ಅವಹೇಳಕಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಥಾಣೆ ಹಾಗೂ ದಕ್ಷಿಣ ಮುಂಬೈನಲ್ಲಿ ಎರಡು ಪ್ರಕರಣ ದಾಖಲಾಗಿವೆ. ಧಾರ್ಮಿಕ ಭಾವನೆಗೆ ನೋವುಂಟು ಮಾಡಿರುವುದು ಹಾಗೂ ಶತ್ರುತ್ವ ಭಾವನೆ ಬೆಳೆಸಲು ಪ್ರೇರಣೆ ನೀಡಿರುವುದಾಗಿ ಅವರ ವಿರುದ್ಧ ದಾಖಲಿಸಲಾಗಿರುವ ದೂರುಗಳಲ್ಲಿ ಆರೋಪಿಸಲಾಗಿದೆ.