ಟ್ರಂಪ್ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Team Udayavani, Jan 21, 2020, 9:14 PM IST
ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶದಲ್ಲಿ ಉದ್ಯಮಿಗಳಿಂದ ಅಭಿನಂದನೆ ಸ್ವೀಕರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ದಾವೊಸ್: ಸ್ವಿಟ್ಜರ್ಲೆಂಡಿನ ದಾವೊಸ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದ ಮೊದಲನೇ ದಿನವಾದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯೊಬ್ಬರು ಅಮೆರಿಕಾ ಅಧ್ಯಕ್ಷರ ಭಾಷಣದಲ್ಲಿ ಪಾಲ್ಗೊಂಡಿರುವುದು ಇದೇ ಪ್ರಥಮವಾಗಿದೆ.
ವರ್ಲ್ಡ್ ಎಕನಾಮಿಕ್ ಫೋರಂ ಸಮಾವೇಶದಲ್ಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರನ್ನು ಒಳಗೊಂಡಂತೆ ಪೂರ್ಣ ಪ್ರಮಾಣದ ನಿಯೋಗದೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. 2003ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಅಮೆರಿಕಾ ಸರ್ಕಾರದ ಕಾರ್ಯದರ್ಶಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೋಯೆಲ್, ಕೇಂದ್ರ ಹಡಗು ಸಾರಿಗೆ ಖಾತೆ ರಾಜ್ಯ ಸಚಿವ ಮನ್ ಸುಖ್ ಮಾಂಡವೀಯ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸಭೆಯ ನಂತರ ಟ್ರಂಪ್ ಅವರ ಭಾಷಣದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಟ್ರಂಪ್ ಅವರ ಭಾಷಣ, ಸರಿಯಾದ ದಿಕ್ಕಿನಲ್ಲಿದ್ದರೂ, ತಮ್ಮ ದೇಶದ ಆರ್ಥಿಕತೆಯ ಕುರಿತೇ ಅವರು ಹೆಚ್ಚು ಗಮನವನ್ನು ಕೇಂದ್ರೀಕರಿಸಿದ್ದರು. ಆದರೆ ಯಾವುದೇ ದೇಶದ ನಾಯಕನ ದೃಷ್ಟಿಯಿಂದ ಇದು ಸಹಜ” ಎಂದು ಅಭಿಪ್ರಾಯಪಟ್ಟರು.
ಇಂತಹ ಜಾಗತಿಕ ವೇದಿಕೆಗಳು ತಮ್ಮದೇ ಸಂಪನ್ಮೂಲ ಹೊಂದಿಸಲು ಅಡಚಣೆ ಇರುವ ರಾಜ್ಯಗಳಿಗೆ ಅತಿ ಅಗತ್ಯವಾದುದು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಹೂಡಿಕೆಗಳು ರಾಜ್ಯದ ಆರ್ಥಿಕತೆ ವೃದ್ಧಿಸುವ ಜೊತೆಗೆ ಯುವಕರಿಗೆ ಉದ್ಯೋಗ ಒದಗಿಸುತ್ತವೆ. ಉದ್ಯೋಗ ಸೃಷ್ಟಿಯ ನಮ್ಮ ಗುರಿ ಈಡೇರಲು ಹೂಡಿಕೆಯ ಅಗತ್ಯವಿದೆ. ಇಂತಹ ಅವಕಾಶಗಳು ರಾಜ್ಯದ ಆರ್ಥಿಕತೆ ವೃದ್ಧಿಗೆ ಪೂರಕವಾಗಿವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇವಲ ಎರಡು-ಮೂರು ಸಾವಿರ ಜನಸಂಖ್ಯೆಯ ಈ ಪುಟ್ಟ ಗ್ರಾಮದಲ್ಲಿ ಮೈನಸ್ 9 ಡಿಗ್ರಿ ಸೆಲ್ಸಿಯಸ್ ಚಳಿಯನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳು ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಉತ್ಸಾಹದಿಂದ ಸರಣಿ ಸಭೆಗಳನ್ನು ನಡೆಸುತ್ತಿರುವುದು ಇತರರಿಗೆ ಅಚ್ಚರಿಯ ವಿಷಯವಾಗಿತ್ತು.