ನೌಕಾಪಡೆಯಿಂದ ಕರಾವಳಿ ರಕ್ಷಣಾ ಕವಾಯತು
Team Udayavani, Jan 24, 2019, 12:30 AM IST
ಹೊಸದಿಲ್ಲಿ: ಮುಂಬಯಿ ದಾಳಿ ನಂತರದಲ್ಲಿ ಇದೇ ಮೊದಲ ಬಾರಿಗೆ ನೌಕಾಪಡೆಯು ಕರಾವಳಿ ರಕ್ಷಣಾ ಕವಾಯತನ್ನು ಆರಂಭಿಸಿದೆ. ದೇಶದ 7516 ಕಿ.ಮೀ ಉದ್ದದ ಕರಾವಳಿಯಲ್ಲಿ ಈ ಕವಾಯತು ನಡೆಸಲಾಗುತ್ತಿದೆ. 150 ಹಡಗುಗಲು, 40 ಯುದ್ಧ ವಿಮಾನಗಳ ಜೊತೆಗೆ ನೌಕಾಪಡೆ ಮತ್ತು ಕರಾವಳಿ ಪಡೆಯ ಪ್ರಮುಖ ಸಿಬ್ಬಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಇದನ್ನು ಸೀ ವಿಜಿಲ್ ಎಂದು ಕರೆಯಲಾಗಿದ್ದು, ವ್ಯಾಪಕ ಪ್ರಮಾಣದಲ್ಲಿ ನಡೆಸಲಾಗುತ್ತಿದೆ ಎಂದು ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿ.ಕೆ.ಶರ್ಮಾ ಹೇಳಿದ್ದಾರೆ. 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ವ್ಯಾಪಿಸಿರುವ ಕರಾವಳಿಯಾದ್ಯಂತ ಕವಾಯತು ನಡೆಸಲಾಗುತ್ತಿದೆ.
ಮುಂಬಯಿ ದಾಳಿ ನಂತರ ನೌಕಾಪಡೆಯು ನಮ್ಮ ದೇಶದ ಕರಾವಳಿಯ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ. ಈ ಕವಾಯತಿನಿಂದಾಗಿ ನಮ್ಮ ಸಾಮರ್ಥ್ಯ ಮತ್ತು ಬಲಹೀನತೆ ತಿಳಿದುಬರಲಿದ್ದು, ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಲು ನೆರವಾಗಲಿದೆ ಎಂದು ಕ್ಯಾಪ್ಟನ್ ಶರ್ಮಾ ಹೇಳಿದ್ದಾರೆ.