ಗೋವಾ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಕನ್ನಡಿಗರು
Team Udayavani, Oct 31, 2021, 5:29 PM IST
ಪಣಜಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಅಗಲಿಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಇದೊಂದು ಕನ್ನಡಿಗರಿಗೆ ಮತ್ತು ಅವರೆಲ್ಲ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದಂತಹ ಘಟನೆಯಾಗಿದೆ. ಸಾರ್ವಜನಿಕ ಹಾಗೂ ಸೇವಾ ಕ್ಷೇತ್ರದಲ್ಲಿ ಪುನೀತ್ ರಾಜಕುಮಾರ್ ರವರ ಕೊಡುಗೆ ಅಮೂಲ್ಯವಾದ್ದಾಗಿದೆ ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ನುಡಿದರು.
ಗೋವಾದ ಬಿಚೋಲಿಂನಲ್ಲಿ ಕರ್ಮಭೂಮಿ ಕನ್ನಡ ಸಂಘದ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಖ್ಯಾತ ನಟ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಶೃದ್ಧಾಂಜಿಲಿ ಕಾರ್ಯಕ್ರಮದಲ್ಲಿ ಕರ್ಮಭೂಮಿ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಗಲಿದ ನಟನಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು.
ಸಾರ್ವಜನಿಕ ಕ್ಷೇತ್ರದಲ್ಲಿ ಪುನೀತ್ ರಾಜಕುಮಾರ್ ರವರು ಬಹುದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ಡಾ. ರಾಜಕುಮಾರ್ ರವರಲ್ಲಿದ್ದ ಆದರ್ಶ ಗುಣಗಳನ್ನೇ ಪುನೀತ್ ರವರು ಕೂಡ ಅಳವಡಿಸಿಕೊಂಡಿದ್ದರು. ಪುನೀತ್ ರಾಜಕುಮಾರ್ ರವರ ಸಾವು ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದ್ದು, ಆ ಶಾಕ್ ನಿಂದ ಹೊರಬರುವುದು ಕೂಡ ಕಷ್ಟ ಎಂಬಂತಾಗಿದೆ ಎಂದು ಹನುಮಂತಪ್ಪ ಶಿರೂರ್ ನುಡಿದರು.