ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆಯಾಗಿಲ್ಲ; ಎಸ್ಎಂಕೆ
Team Udayavani, Mar 24, 2017, 6:44 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆಯಾಗಿಲ್ಲ. ಮೋದಿಯವರು ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಶ್ಲಾಘಿಸಿರುವ ಮಾಜಿ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ಕಾಂಗ್ರೆಸ್ ಪಕ್ಷದ್ದು ಸೋಗಲಾಡಿತನದ ಜಾತ್ಯತೀತತೆ ಎಂದು ವಾಗ್ದಾಳಿ ನಡೆಸಿದರು.
ಖಾಸಗಿ ಟಿವಿ ಚಾನೆಲ್ ವೊಂದರ ಜೊತೆ ಮಾತನಾಡಿದ ಅವರು, ನಾನು ಯಾವುದೇ ಹುದ್ದೆಯ ನಿರೀಕ್ಷೆ ಇಟ್ಟುಕೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಮಗಳು, ಅಳಿಯನ ರಾಜಕೀಯ ಭವಿಷ್ಯಕ್ಕಾಗಿಯೂ ಸೇರಿಲ್ಲ ಎಂದು ಹೇಳಿದರು.
ನಾನು ಹಾಕಿದ ಶ್ರಮದ ಫಲವಾಗಿ ನನಗೆ ಮುಖ್ಯಮಂತ್ರಿ ಹುದ್ದೆ ಸಿಕ್ಕಿತ್ತು. ಕಾಂಗ್ರೆಸ್ ಪಕ್ಷ ಪಕ್ಷಪಾತ ಧೋರಣೆ ತೋರಿಸುತ್ತಿದೆ. ಕುಟುಂಬ ರಾಜಕೀಯದಿಂದ ಹೊರಬಂದಿಲ್ಲ ಎಂದು ದೂರಿದರು.
ನಾನು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸಲ್ಲ. ರಾಜ್ಯ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುವುದಾಗಿ ತಿಳಿಸಿದರು.