ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಚೇತಕರೇ ರಾಜೀನಾಮೆ!
Team Udayavani, Aug 6, 2019, 4:03 AM IST
ಕಾಶ್ಮೀರದಲ್ಲಿ 370ನೇ ವಿಧಿ ಮತ್ತು ಜಮ್ಮು ಕಾಶ್ಮೀರ ವಿಭಜನೆ ಕುರಿತಂತೆ ಸರ್ಕಾರದ ನಿರ್ಧಾರದ ವಿರುದ್ಧ ಮತ ಹಾಕುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯಸಭೆ ಕಾಂಗ್ರೆಸ್ನ ಮುಖ್ಯ ಸಚೇತಕ ಭುವನೇಶ್ವರ ಕಲಿತಾ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. 370ನೇ ವಿಧಿ ವಿರೋಧಿಸುವ ಮೂಲಕ ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ.
ಸದಸ್ಯರಿಗೆ ವಿಪ್ ಹೊರಡಿಸುವಂತೆ ಪಕ್ಷ ನನಗೆ ಸೂಚಿಸಿದೆ. ಆದರೆ ವಿಪ್ ಹೊರಡಿಸುವುದು ದೇಶದ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಬಿಡುಗಡೆಯಾಗಿದೆ. ಪಕ್ಷದ ನಾಯಕತ್ವವು ಪಕ್ಷವನ್ನು ಸಂಪೂರ್ಣ ಹಾಳು ಮಾಡಲು ಹೊರಟಿದೆ. ಪಕ್ಷ ನಾಶವಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅಸ್ಸಾಂನಿಂದ ಆಯ್ಕೆಯಾಗಿದ್ದ ರಾಜ್ಯಸಭೆ ಸಂಸದ ಕಲಿತ, ನನ್ನ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ನಾನು ಕಾರಣವನ್ನು ಈಗ ವಿಶ್ಲೇಷಿಸುವುದಿಲ್ಲ. ನಾಳೆ ನಾಡಿದ್ದರಲ್ಲಿ ಈ ಬಗ್ಗೆ ವಿವರಿಸುತ್ತೇನೆ ಎಂದಿದ್ದಾರೆ. ಈ ಮಧ್ಯೆ ಇವರ ರಾಜೀನಾಮೆ ಅಂಗೀಕರಿಸಿದ್ದೇನೆ ಎಂಬುದಾಗಿ ಸಭಾಪತಿ ವೆಂಕಯ್ಯ ನಾಯ್ಡು ಕೂಡ ಪ್ರಕಟಿಸಿದ್ದಾರೆ.