ಕಾಶ್ಮೀರ ವಿಚಾರದಲ್ಲಿ ದೇಶಭಕ್ತರ ಮೂರು ತಲೆಮಾರುಗಳ ಬಲಿದಾನವಿದೆ : ಶಾ
ಕಾಶ್ಮೀರ ಕಾಂಗ್ರೆಸ್ ಗೆ ರಾಜಕೀಯ ವಿಷಯವಾದರೆ ಬಿಜೆಪಿಗೆ ದೇಶಭಕ್ತಿಯ ಸೆಲೆ
Team Udayavani, Sep 22, 2019, 3:51 PM IST
ಮುಂಬಯಿ: ಜಮ್ಮು ಕಾಶ್ಮೀರವನ್ನು ಭಾರತದ ಉಳಿದ ರಾಜ್ಯಗಳೊಂದಿಗೆ ಒಗ್ಗೂಡಿಸಿಕೊಂಡು ಹೋಗಲು ಸಂವಿಧಾನದ 370ನೇ ವಿಧಿ ಮತ್ತು 35 ಎ ಪರಿಚ್ಛೇದಗಳು ಬಹುದೊಡ್ಡ ತೊಡಕಾಗಿದ್ದವು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬಯಿಯಲ್ಲಿ ಚುನಾವಣಾ ಜಾಥಾ ಒಂದನ್ನು ಉದ್ದೇಶಿಸಿ ಮಾತನಾಡಿದ ಶಾ ಅವರು ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ‘370ನೇ ವಿಧಿಯ ವಿಚಾರ ರಾಜಕೀಯ ವಿಷಯ ಎಂದು ಕಾಂಗ್ರಸ್ ನಾಯಕ ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ನಾನು ಅವರಿಗೆ ಹೇಳಬಯಸುವುದೇನೆಂದರೆ ನೀವು ಇತ್ತೀಚೆಗಷ್ಟೇ ರಾಜಕೀಯಕ್ಕೆ ಬಂದವರು ಆದರೆ ಜನಸಂಘ ಮತ್ತು ಬಿಜೆಪಿ ಕಳೆದ ಮೂರು ತಲೆಮಾರುಗಳು ಕಾಶ್ಮೀರ ವಿಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಡಗಿಟ್ಟಿದ್ದಾರೆ ಎಂಬುದನ್ನು ಮರೆಯಬೇಡಿ. ಕಾಶ್ಮೀರವು ಕಾಂಗ್ರೆಸ್ ಪಾಲಿಗೆ ಒಂದು ರಾಜಕೀಯ ವಿಚಾರವಾದರೆ ನಮಗೆ ಅದೊಂದು ದೇಶಪ್ರೇಮ ಮತ್ತು ದೇಶಭಕ್ತಿಯ ವಿಚಾರವಾಗಿದೆ’ ಎಂದು ಶಾ ಅವರು ರಾಹುಲ್ ಗಾಂಧಿ ನಿಲುವನ್ನು ತರಾಟೆಗೆ ತೆಗೆದುಕೊಂಡರು.
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಜನರು ಹೆಳುತ್ತಲೇ ಬಂದಿದ್ದಾರೆ. ಆದರೆ ಯಾರೂ ಸಹ ಮಹಾರಾಷ್ಟ್ರ ಅಥವಾ ಕರ್ನಾಟಕ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವುದಿಲ್ಲ. ಜನ ಯಾಕೆ ಹೀಗೆ ಹೇಳುತ್ತಾರೆಂದರೆ ಅವರಿಗೆ ಇದನ್ನು ಸಾಧಿಸಿ ತೋರಿಸಬೇಕಾಗಿದೆ, ಕಾಶ್ಮೀರ ಬಾರತದ ಅವಿಭಾಜ್ಯ ಅಂಗ ಎಂದು ಇವತ್ತು ನಾನು ಹೆಮ್ಮೆಯಿಂದಲೇ ಹೇಳುತ್ತಿದ್ದೇನೆ ಯಾಕೆಂದರೆ ನಾವಿದನ್ನು ಅಕ್ಷರಶಃ ಸಾಧಿಸಿ ತೋರಿಸಿದ್ದೇವೆ’ ಎಂದು ಶಾ ಹೇಳಿದರು.