ಪಾದಚಾರಿ ಮೇಲೆ ಕಾರು ಹತ್ತಿಸಿದ ಕಾನ್ಸ್ಟೆಬಲ್!
Team Udayavani, May 3, 2017, 11:34 AM IST
ಮುಂಬಯಿ: “ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಮಾತಿದೆ. ನಾಗರಿಕರ ರಕ್ಷಣೆಯ ಹೊಣೆಹೊತ್ತ ಆರಕ್ಷಕರೇ ರಾಕ್ಷಸರಂತೆ ಆಡಿದರೆ? ಮುಂಬಯಿಯಲ್ಲಿ ನಡೆದ ಘಟನೆಯೊಂದು ಇಂಥ ಪ್ರಶ್ನೆ ಮೂಡಿಸಿದೆ.
ವಾಣಿಜ್ಯ ನಗರಿಯ ಜನನಿಬಿಡ ಮಾರ್ಕೆಟ್ನಲ್ಲಿ ಪೊಲೀಸ್ ಕಾನ್ಸ್ಟೆಬಲ್ವೊಬ್ಬರು ಉದ್ದೇಶಪೂರ್ವಕವಾಗಿ ಪಾದಚಾರಿಯೊಬ್ಬನ ಮೇಲೆ ತಮ್ಮ ಇನೋವಾ ಕಾರನ್ನು ಹತ್ತಿಸಲು ಯತ್ನಿಸಿದ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರು ಲಕ್ಷ ರೂ. ಹಣ ವಾಪಸ್ ನೀಡದೇ ಸತಾಯಿಸುತ್ತಿದ್ದ ಎಂಬ ಕಾರಣಕ್ಕಾಗಿ ಈ ಕೃತ್ಯ ನಡೆಸಿದೆ ಎಂದು ಕಾನ್ಸ್ಟೆಬಲ್ ರಮೇಶ್ ಅವಾಟೆ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಅತುಲ್ ಪಟೇಲ್ನನ್ನು ಕಾಣುತ್ತಿದ್ದಂತೆಯೇ ಅವಾಟೆ ಅವರು ತಮ್ಮ ಇನ್ನೋವಾ ಕಾರನ್ನು ಆತನ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಆತ ಕಾರಿನ ಬಾನೆಟ್ ಮೇಲೆ ಬಿದ್ದಿದ್ದರೂ, ಅವಾಟೆ ಕಾರನ್ನು ಚಲಾಯಿಸುತ್ತಲೇ ಸಾಗಿದ್ದಾರೆ. ಕೊನೆಗೆ ಆತ ಕಾರಿನಿಂದ ಕೆಳಕ್ಕೆ ಬಿದ್ದಿದ್ದಾನೆ. ಆದರೆ, ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅವಾಟೆ ಅವರು 26/11ರ ಮುಂಬೈ ದಾಳಿಯಲ್ಲಿ ಹುತಾತ್ಮರಾದ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಾಲಸ್ಕರ್ ಅವರ ಕಾರು ಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದರು.