ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಸಿಕ್ಕಿತು ಚಾಲನೆ
ಸಿಎಂ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಪೂಜೆ
Team Udayavani, May 27, 2020, 7:19 AM IST
ಅಯೋಧ್ಯೆಯ ಜನ್ಮಭೂಮಿಯಲ್ಲಿ ತಲೆ ಎತ್ತಲಿರುವ ಭವ್ಯ ರಾಮ ಮಂದಿರದ ಪ್ರತಿಕೃತಿ.
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಬಹು ನಿರೀಕ್ಷಿತ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರಕಿದೆ.
ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಮಹಾಂತ ನೃತ್ಯ ಗೋಪಾಲ ದಾಸ್ ಅವರು ಮಂಗಳವಾರ ರಾಮ ಲಲ್ಲಾನಿಗೆ ನಮಸ್ಕರಿಸಿ, ಭೂಮಿಪೂಜೆ ನೆರವೇರಿಸುವ ಮೂಲಕ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದರು.
27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶ್ರೀ ರಾಮ ಲಲ್ಲಾ ವಿಗ್ರಹವನ್ನು ತಾತ್ಕಾಲಿಕ ದೇವಾಲಯದಿಂದ ಹೊರಗೆ ಸ್ಥಳಾಂತರಿಸಲಾಯಿತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ವಿಗ್ರಹವನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಮಾನಸ ಭವನಕ್ಕೆ ಒಯ್ಯಲಾಯಿತು.
ಹರಿದುಬಂದ ದೇಣಿಗೆ
ರಾಮಮಂದಿರ ನಿರ್ಮಾಣಕ್ಕೆ ಅಪಾರ ದೇಣಿಗೆ ಸಂಗ್ರಹವಾಗುತ್ತಿದೆ. ಹಣದ ಕೊರತೆ ಆಗುವುದಿಲ್ಲವೆಂಬ ವಿಶ್ವಾಸವಿದೆ.
ವೈಭವ ಮತ್ತು ಭವ್ಯತೆಯಲ್ಲಿ ಬೇರೆ ಸಾಟಿಯಿಲ್ಲದಂತೆ ದೇಗುಲ ತಲೆ ಎತ್ತಲಿದೆ ಎಂದು ರಾಮ ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಹೇಳಿದ್ದಾರೆ.
ಲಾಕ್ ಡೌನ್ ಅವಧಿಯಲ್ಲೇ ಟ್ರಸ್ಟ್ ನ ಎರಡು ಖಾತೆಗಳಿಗೆ ಸುಮಾರು 4.60 ಕೋಟಿ ರೂಪಾಯಿಗಳಷ್ಟು ದೇಣಿಗೆ ಸಂಗ್ರಹಗೊಂಡಿದೆ.
ಶತಮಾನದಷ್ಟು ಸುದೀರ್ಘ ವಿವಾದವಾಗಿದ್ದ ರಾಮ ಜನ್ಮಭೂಮಿಯ ಕುರಿತು ಸುಪ್ರೀಂ ಕೋರ್ಟ್ 2019ರ ನ.9ರಂದು ಐತಿಹಾಸಿಕ, ಅಂತಿಮ ತೀರ್ಪು ಪ್ರಕಟಿಸಿತ್ತು.