ದಿಲ್ಲಿಯಲ್ಲಿ ತಂಪು ಹವೆ ಮುಂದುವರಿಕೆ
Team Udayavani, Jan 1, 2020, 1:45 AM IST
ಹೊಸದಿಲ್ಲಿ: ಕಳೆದೊಂದು ಶತಮಾನದಲ್ಲೇ ಕಂಡರಿಯದ ಭೀಕರ ಚಳಿಗೆ ತುತ್ತಾಗಿರುವ ದಿಲ್ಲಿಯಲ್ಲಿ ಶೀತಲ ಮಾರುತಗಳು ಮಂಗಳವಾರವೂ ಮುಂದು ವರಿದಿದ್ದವು. ಅಲ್ಲಲ್ಲಿ ಕೊಂಚ ಸೂರ್ಯನ ಕಿರಣಗಳು ಕಾಣಿಸಿಕೊಂಡು ಜನರಲ್ಲಿ ಆಹ್ಲಾದತೆ ತಂದರೂ ಚಳಿಯ ಬಾಧೆ ಮಾತ್ರ ಕಡಿಮೆಯಾ ಗಿರಲಿಲ್ಲ. ದಿಲ್ಲಿಯ ನಾನಾ ಪ್ರಾಂತ್ಯಗಳಲ್ಲಿ ತಾಪಮಾನ 5 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ಇತ್ತು.
ಸದ್ಯಕ್ಕೆ ಬೀಸುತ್ತಿರುವ ಶೀತಲ ಮಾರುತಗಳು ಹಾಗೆಯೇ ಮುಂದುವರಿಯಲಿದ್ದು, ಜ. 3ರವರೆಗೆ ಯಾವುದೇ ಹೊಸ ಮಾರುತಗಳು ದಿಲ್ಲಿಗೆ ಅಪ್ಪಳಿಸುವ ಸೂಚನೆಗಳಿಲ್ಲ ಎಂದು ಹವಮಾನ ಇಲಾಖೆ ತಿಳಿಸಿದೆ. ಆದರೂ, ಮಂಗಳವಾರದ ಶೀತಲ ಮಾರುತಗಳು ಜೋರಾಗಿ ಬೀಸುತ್ತಿದ್ದರಿಂದ ದಟ್ಟ ಮಂಜಿನ ವಾತಾವರಣ ದಿಲ್ಲಿ-ಎನ್ಸಿಆರ್ ವಲಯ ಹಾಗೂ ಪಶ್ಚಿಮ ಉತ್ತರ ಪ್ರದೇಶಕ್ಕೂ ಆವರಿ ಸಿತ್ತು ಎಂದು ಇಲಾಖೆ ತಿಳಿಸಿದೆ.
ರಾಜಸ್ಥಾನದಲ್ಲಿ 2 ಸಾವು: ದಟ್ಟ ಮಂಜು ಮುಸುಕಿದ ಕಾರಣದಿಂದಾಗಿ, ಜೈಲಸ್ಮೆರ್-ಜೋಧಪುರ್ ರಾಷ್ಟ್ರೀಯ ಹೆದ್ದಾರಿಯ ಬೋಜ್ಕಾ ಎಂಬ ಹಳ್ಳಿಯ ಬಳಿ ಲಾರಿ ಮತ್ತು ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಸಾವಿಗೀಡಾಗಿ, ನಾಲ್ವರು ಗಾಯಗೊಂಡರು.