ಭೂಮಿ ನುಂಗಲು ಮಾಸ್ಟರ್ ಪ್ಲ್ಯಾನ್:ರಾತ್ರೋ ರಾತ್ರಿ ನಿರ್ಮಾಣವಾಯಿತು ‘ಕೊರೊನಾ ಮಾತಾ’ ದೇವಸ್ಥಾನ
Team Udayavani, Jun 13, 2021, 2:37 PM IST
ಉತ್ತರ ಪ್ರದೇಶ : ಇಡೀ ವಿಶ್ವಕ್ಕೆ ಸಂಕಷ್ಟ ತಂದೊಡ್ಡಿರುವ ಕೋವಿಡ್ ಮಹಾಮಾರಿ ಸೋಂಕು ಹೊಡೆದೊಡಿಸಲು ನಾನಾ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇಲ್ಲೊಂದು ಉತ್ತರ ಪ್ರದೇಶದಲ್ಲಿ ಕೋವಿಡ್ ಮಾತೆಯ ದೇವಸ್ಥಾನ ನಿರ್ಮಿಸಿ ಪೂಜಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ಶುಕ್ಲುಪುರ್ ಗ್ರಾಮದಲ್ಲಿ ಕೊರೋನಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಕೊರೋನಾಗೆ ದೇವರ ಸ್ವರೂಪ ನೀಡಿದ ಇಲ್ಲಿನ ಮಂದಿ ಕೊರೋನಾ ಮಾತೆಯನ್ನು ಪ್ರತಿಷ್ಟಾಪಿಸಿ, ಗ್ರಾಮಸ್ಥರು ಪೂಜೆ ಮಾಡುತ್ತಿದ್ದರು. ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ ಇಲ್ಲಿನ ಜಿಲ್ಲಾಡಳಿತ ದೇವಾಲಯವನ್ನು ನೆಲಸಮ ಮಾಡಿದೆ.
ದೇವಸ್ಥಾನ ನಿರ್ಮಾಣದ ಹಿಂದಿತ್ತು ಖತರ್ನಾಕ್ ಐಡಿಯಾ :
ಕೊರೊನಾ ಮಾತೆ ಮಂದಿರ ನಿರ್ಮಾಣದ ಹಿಂದೆ ವ್ಯಕ್ತಿಯೊಬ್ಬನ ಸ್ವ ಹಿತಾಸಕ್ತಿ ಇತ್ತು. ಗ್ರಾಮದ ಜನರಿಗೆ ಕೊರೋನಾ ಭಯ ಮೂಡಿಸಿ. ತನ್ನ ವಿರೋಧಿಯ ಭೂಮಿ ಒತ್ತುವರಿ ನಡೆಸಿದ್ದಾರೆ. ಈ ವಿವಾದ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಭೂಮಿ ಒತ್ತುವರಿ ಮಾಡಿಕೊಂಡಿದ್ದ ಜಾಗದಲ್ಲಿನ ದೇವಾಲಯವನ್ನು ಕೆಡವಿದೆ.
ಕಳೆದ ಐದು ದಿನಗಳ ಹಿಂದೆ ಸ್ಥಳೀಯರ ಸಹಾಯದಿಂದ ಲೊಕೇಶ್ ಕುಮಾರ್ ಶ್ರೀವಾತ್ಸವ ಇಲ್ಲಿ ಮಂದಿರ ಕಟ್ಟಿಸಿದ್ದರು. ಕೊರೋನಾ ಮಾತೆಯ ಮೂರ್ತಿಯನ್ನು ಕೂರಿಸಿ , ರಾಧೆ ಶ್ಯಾಮ್ ವರ್ಮ್ ಎಂಬ ಪುರೋಹಿತನನ್ನು ನೇಮಕ ಮಾಡಲಾಗಿತ್ತು. ಇದಾದ ಬಳಿಕ ಜನರು ದೇವರ ಆರಾಧನೆಗೆ ಮುಂದಾದರು.
ನೋಯ್ಡ ಮೂಲಕ ನಾಗೇಶ್ ಕುಮಾರ್ ಶ್ರೀವಾತ್ಸವ್ ಮತ್ತು ಜೈ ಪ್ರಕಾಶ್ ಶ್ರೀವಾತ್ಸವ ಪಾಲುದಾರಿಕೆ ಭೂಮಿಯನ್ನು ಈ ಗ್ರಾಮದಲ್ಲಿ ಹೊಂದಿದ್ದರು. ಅವರು ನೋಯ್ಡಗೆ ಮರಳುತತ್ತಿದ್ದಂತೆ ಈ ದೇವಾಲಯ ನಿರ್ಮಾಣವಾಗಿದೆ. ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ನಾಗೇಶ್ ಪೊಲೀಸರಿಗೆ ದೂರು ನೀಡಿದ್ದರು.
ವಿವಾದಿತ ಜಮೀನಿನಲ್ಲಿ ಏಕಾಏಕಿ ದೇವಾಲಯ ನಿರ್ಮಿಸಿದ ಕಾರಣ ಪೊಲೀಸರು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಈ ಹಿನ್ನಲೆ ಈಗ ವಿರೋಧಿ ಪಕ್ಷದ ಗುಂಪು ಪೊಲೀಸರ ವಿರುದ್ಧ ಹರಿಹಾಯ್ದಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.