ಭಾರತದ ಬಾಗಿಲು ಬಂದ್
Team Udayavani, Mar 12, 2020, 6:15 AM IST
ಹೊಸದಿಲ್ಲಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆ ಗಟ್ಟಲು ಕೇಂದ್ರ ಸರಕಾರವು ಬಹುತೇಕ ಭಾರತೀಯ ವೀಸಾಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಈಗಾಗಲೇ ನೀಡಲಾಗಿರುವ ವೀಸಾಗಳಲ್ಲಿ ಹಲವನ್ನು ಎ. 15ರ ವರೆಗೆ ಅಮಾನತುಗೊಳಿಸಲಾಗಿದೆ. ಹೊಸ ನಿಯಮ ಮಾ. 13ರ ಸಂಜೆ ಜಾರಿಯಾಗಲಿದೆ. ಅಂದರೆ, ಮಾ. 13ರ ಸಂಜೆ 5:30ಕ್ಕೂ ಮೊದಲು ಭಾರತಕ್ಕೆ ತೆರಳಲು ಮಾತ್ರ ಅವಕಾಶ ಸಿಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಕೆಲವಕ್ಕೆ ವಿನಾಯಿತಿ: ರಾಜತಾಂತ್ರಿಕ, ಆಡಳಿತಾತ್ಮಕ, ವಿಶ್ವಸಂಸ್ಥೆ ಅಥವಾ ಇನ್ನಿತರ ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ, ಯೋಜನೆಗೆ ಸಂಬಂಧಿಸಿದ ವೀಸಾಗಳಿಗೆ ವಿನಾಯಿತಿ ನೀಡಲಾಗಿದೆ.
ಈ ನಡುವೆ, ಕೊರೊನಾ ಸೋಂಕು ಜಗತ್ತು ಕಂಡ ತೀವ್ರ ತೆರನಾದ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಬ್ರಿಟಿಷರ ಕಾಲದ ಕಾಯ್ದೆ ಜಾರಿ
ಬ್ರಿಟಿಷರ ಕಾಲದ “1897ರ ಸಾಂಕ್ರಾಮಿಕ ರೋಗ ಕಾಯ್ದೆ’ಯನ್ನು ಕೇಂದ್ರ ಸರಕಾರವು ಪುನಃ ಜಾರಿಗೊಳಿಸಿದೆ. ಈ ಕಾಯ್ದೆ, ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವವರು ಸೋಂಕಿತರೆಂಬ ಅನುಮಾನ ಬಂದಲ್ಲಿ, ಅವರನ್ನು ಕೂಡಲೇ ಪರೀಕ್ಷೆಗೊಳಪಡಿಸುವ, ಸೋಂಕು ಸಾಬೀತಾದರೆ ಅವರನ್ನು ಕೂಡಲೇ ಇತರರಿಂದ ಪ್ರತ್ಯೇಕವಾಗಿಸಿ ಆಸ್ಪತ್ರೆಗಳಲ್ಲಿ ಇರಿಸುವ ಪರಮಾಧಿಕಾರವನ್ನು ಸರಕಾರಕ್ಕೆ ನೀಡುತ್ತದೆ.