ಮನೆ ಮನೆಗೆ ಲಸಿಕೆ ಅಭಿಯಾನ: ನವಿಮುಂಬಯಿ ಮನಪಾ ನಿರ್ಧಾರ
Team Udayavani, Jul 22, 2021, 11:52 PM IST
ನವಿಮುಂಬಯಿ: ಅಂಗವಿಕಲರಿಗೆ, ಭಿಕ್ಷುಕರಿಗೆ ಮತ್ತು ಮನೆಯಿಲ್ಲದವರಿಗೆ ಲಸಿಕೆ ನೀಡುವ ಅಭಿಯಾನವನ್ನು ಪ್ರಾರಂಭಿಸಿದ ಬಳಿಕ ಮನೆಗಳಿಗೆ ಹೋಗಿ ಹಾಸಿಗೆ ಹಿಡಿದ ನಾಗರಿಕರಿಗೆ ಲಸಿಕೆ ಹಾಕಲು ನವಿಮುಂಬಯಿ ಮಹಾನಗರ ಪಾಲಿಕೆ ನಿರ್ಧರಿಸಿದೆ. ಅದಕ್ಕಾಗಿ ಯೋಜನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಭಿಯಾನ ಪ್ರಾರಂಭವಾಗಲಿದೆ ಎಂದು ಮನಪಾ ಆಯುಕ್ತ ಅಭಿಜೀತ್ ಬಂಗಾರ್ ತಿಳಿಸಿದ್ದಾರೆ.
ಜನವರಿಯಲ್ಲಿ ಕೊರೊನಾ ವ್ಯಾಕ್ಸಿನೇಶನ್ ಅನ್ನು ಪರಿಚಯಿಸಿದಾಗಿನಿಂದ ನವಿಮುಂಬಯಿ ಮಹಾನಗರ ಪಾಲಿಕೆ ಆಡಳಿತವು ಸರಿಯಾದ ಯೋಜನೆಗಳೊಂದಿಗೆ ಸಾಧ್ಯವಾದಷ್ಟು ನಾಗರಿಕರಿಗೆ ಲಸಿಕೆ ಹಾಕುವ ಪ್ರಯತ್ನಗಳನ್ನು ಮಾಡುತ್ತಿದೆ. ಸರಕಾರದಿಂದ ಲಭ್ಯವಿರುವ ಲಸಿಕೆಗಳ ದಾಸ್ತಾನು ಪ್ರಕಾರ ನಗರದಲ್ಲಿ ಲಸಿಕೆ ಹಾಕಲಾಗುತ್ತಿದೆ. ಆದರೆ ಲಸಿಕೆಗಳು ಲಭ್ಯವಿಲ್ಲದ ಕಾರಣ ವ್ಯಾಕ್ಸಿನೇಶನ್ ಕೇಂದ್ರಗಳನ್ನು ಮುಚ್ಚಬೇಕಾಗಿದೆ. ಈ ವರೆಗೆ ಒಟ್ಟು 8,11,159 ಮಂದಿಗೆ ಮೊದಲ ಎರಡನೇ ಡೋಸ್ ಲಸಿಕೆ ನೀಡಿದೆ.
ಅಂಗವಿಕಲರಿಗೆ ಡ್ರೈವ್-ಇನ್ ವ್ಯಾಕ್ಸಿನೇಶನ್ :
ನಗರದಲ್ಲಿ ಸೋಂಕನ್ನು ಹರಡುವ ಅಂಶಗಳಿಗೆ ಆದ್ಯತೆ ನೀಡುವ ಮೂಲಕ ಈ ವ್ಯಾಕ್ಸಿನೇಶನ್ ಮಾಡಲಾಗುತ್ತದೆ. ಇದು ಅಂಗವಿಕಲರಿಗೆ ಡ್ರೈವ್-ಇನ್ ವ್ಯಾಕ್ಸಿನೇಶನ್ ಅನ್ನು ಒಳಗೊಂಡಿದೆ. ನಗರದಲ್ಲಿ ಮನೆಯಿಲ್ಲದವರಿಗೆ ಆಡಳಿತವು ಅವರ ಸ್ಥಳಕ್ಕೆ ಹೋಗುವ ಮೂಲಕ ಲಸಿಕೆ ಹಾಕಿದೆ. ಅಂದಿನಿಂದ ನಗರವು ಹೆಚ್ಚು ಸಂಪರ್ಕ ಹೊಂದಿರುವವರಿಗೆ ವಿಶೇಷ ವ್ಯಾಕ್ಸಿನೇಶನ್ ಅಭಿಯಾನವನ್ನು ಪ್ರಾರಂಭಿಸಿದೆ. ಈಗ ನವಿಮುಂಬಯಿ ಮನಪಾ ಆಡಳಿತವು ಹಾಸಿಗೆ ಹಿಡಿದ ನಾಗರಿಕರಿಗೆ ಮನೆ ಮನೆಗೆ ಲಸಿಕೆ ಅಭಿಯಾನ ನಡೆಸಲು ನಿರ್ಧರಿಸಿದೆ.
23 ನಾಗರಿಕ ಆರೋಗ್ಯ ಕೇಂದ್ರಗಳಿಗೆ ಸೂಚನೆ:
ಹಾಸಿಗೆ ಹಿಡಿದಿರುವ ನಾಗರಿಕರಿಗೆ ಮನಪಾ ಸಹಾಯವಾಣಿ ಮೂಲಕ ತಿಳಿಸಲಾಗುವುದು. ಹಾಸಿಗೆ ಹಿಡಿದವರಿಗೆ ಅವರ ಸಂಬಂಧಪಟ್ಟ ವೈದ್ಯರು ದಾಖಲೆಗಳಿಂದ ದೃಢೀಕರಣ ನೀಡಿದ ಬಳಿಕ ಅಂತಹ ವ್ಯಕ್ತಿಗಳಿಗೆ ತಮ್ಮ ಮನೆಗಳಲ್ಲಿ ಲಸಿಕೆ ನೀಡಲಾಗುವುದು. ಅಂತಹ ರೋಗಿಗಳಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು 23 ಆಯಾಯಾ ನಾಗರಿಕ ಆರೋಗ್ಯ ಕೇಂದ್ರಗಳಿಗೆ ನೀಡಲಾಗಿದೆ. ಲಸಿಕೆ ವ್ಯರ್ಥವಾಗದಂತೆ ಮಧ್ಯಾಹ್ನ ಲಸಿಕೆ ಹಾಕಲು ನಿರ್ಧರಿಸಲಾಗಿದೆ.
ಗುರುವಾರ ಮಾತ್ರ ಕೋವ್ಯಾಕ್ಸಿನ್ ಲಸಿಕೆ ಲಭ್ಯ:
ಸರಕಾರದಿಂದ ಲಸಿಕೆಗಳನ್ನು ಪಡೆಯದ ಕಾರಣ ನಾಗರಿಕರು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ ವಾರ 8,000 ಕೋವಿಡ್ ಲಸಿಕೆಗಳನ್ನು ಪಡೆಯಲಾಗಿದೆ. ಅದರಲ್ಲಿ 4,350 ಕೊವಿಶೀಲ್ಡ್ ಮತ್ತು 250 ಕೋವ್ಯಾಕ್ಸಿನ್ ಒಳಗೊಂಡಿದೆ. ಮನಪಾಗೆ ಇನ್ನೂ ಹೆಚ್ಚಿನ ಪ್ರಮಾಣದ ಲಸಿಕೆ ಬಂದಿಲ್ಲ. ಆದ್ದರಿಂದ ಮನಪಾದ ವಾಶಿ, ನೆರುಲ್ ಮತ್ತು ಐರೋಲಿ ಆಸ್ಪತ್ರೆಗಳಲ್ಲಿ ಗುರುವಾರ ಮಾತ್ರ ಎರಡನೇ ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುವುದು.
ಮನಪಾ ಸಿದ್ಧತೆ :
ನಗರದಲ್ಲಿ ಹಾಸಿಗೆ ಹಿಡಿದವರಿಗೆ ಮನೆ-ಮನೆ ಲಸಿಕೆ ಅಭಿಯಾನ ನಡೆಸಲು ಮನಪಾ ಸಿದ್ಧತೆ ನಡೆಸಿದೆ. ಸರಕಾರದ ಮಾರ್ಗಸೂಚಿಗಳ ಪ್ರಕಾರ ಈ ಅಭಿಯಾನವನ್ನು ಜಾರಿಗೆ ತರಲಾಗುವುದು. ಮನಪಾ ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದೆ. – ಅಭಿಜೀತ್ ಬಂಗಾರ್,ಆಯುಕ್ತರು, ನವಿಮುಂಬಯಿ ಮನಪಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ