ನಿತೀಶ್ ‘ಹೇಡಿ’, ನೈತಿಕ ನೆಲೆಯಲ್ಲಿ ರಾಜೀನಾಮೆ ನೀಡಬೇಕು: ತೇಜಸ್ವಿ
Team Udayavani, Aug 11, 2018, 3:45 PM IST
ಪಟ್ನಾ : ”ರಾಜ್ಯ ನಡೆಸಲು ಅಸಮರ್ಥರಾಗಿರುವ ಮತ್ತು ಮುಜಫರಪುರ ಬಾಲಿಕಾಶ್ರಮದ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿಕೊಡಲಾಗದ ಹೇಡಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೈತಿಕ ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು” ಎಂದು ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಇಂದು ಶನಿವಾರ ಆಗ್ರಹಿಸಿದ್ದಾರೆ.
”ನಿತೀಶ್ ಕುಮಾರ್ ಒಬ್ಬ ಹೇಡಿ; ಅವರು ಕ್ರಿಮಿನಲ್ಗಳನ್ನು ರಕ್ಷಿಸುತ್ತಿದ್ದಾರೆ” ಎಂದು ನೇರವಾಗಿ ಆರೋಪಿಸಿರುವ ತೇಜಸ್ವಿ ಯಾದವ್, ‘ನಿತೀಶ್ ಗೃಹ ಸಚಿವ ಪದಕ್ಕೆ ರಾಜೀನಾಮೆ ನೀಡಬೇಕು’ ಎಂದು ಹೇಳಿದರು.
”ಸಿಎಂ ನಿತೀಶ್ ಕುಮಾರ್ ಜೀ, ನಿಮಗೆ ಎಲ್ಲವೂ ಗೊತ್ತಿದೆ; ಆದರೂ ನಾನು ನಿಮಗೆ ಒಂದು ವಾರದ ಗಡುವು ನೀಡುತ್ತೇನೆ; ಅಷ್ಟದೊಳಗೆ ಅವರು ಮುಜಫರಪುರ ಬಾಲಿಕಾಶ್ರಮದಿಂದ ನಾಪತ್ತೆಯಾಗಿರುವ ಹೆಮ್ಮಕ್ಕಳು ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು; ಇಲ್ಲದಿದ್ದರೆ ನಾವು ಮಧುಬನಿಯಲ್ಲಿ ಭಾರೀ ದೊಡ್ಡ ಪ್ರತಿಭಟನೆಯನ್ನು ನಡೆಸುತ್ತೇವೆ” ಎಂದು ಯಾದವ್ ಎಚ್ಚರಿಕೆ ಕೊಟ್ಟರು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿಬಿಐ ಬಿಹಾರದ ಮುಜಫರಪುರ ಬಾಲಿಕಾಶ್ರಮ ಸೆಕ್ಸ್ ಸ್ಕ್ಯಾಂಡಲ್ ತನಿಖೆಯನ್ನು ಕೈಗತ್ತಿಕೊಂಡಿರುವುದನ್ನು ಅನಸರಿಸಿ ಯಾದವ್ ಅವರಿಂದ ಈ ಎಚ್ಚರಿಕೆ ಬಂದಿದೆ.