ಗುಜರಾತ್: ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ದಲಿತ ಕುಟುಂಬದ ಮೇಲೆ ಹಲ್ಲೆ
Team Udayavani, Oct 30, 2021, 5:36 PM IST
ಗಾಂಧಿಧಾಮ್: ಗುಜರಾತ್ನ ಕಚ್ ಜಿಲ್ಲೆಯ ಗಾಂಧಿಧಾಮ್ ಪಟ್ಟಣದ ಬಳಿಯಿರುವ ತಮ್ಮ ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿದ್ದಕ್ಕಾಗಿ ದಲಿತ ಕುಟುಂಬದ ಆರು ಸದಸ್ಯರ ಮೇಲೆ ಸುಮಾರು 20 ಜನರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಭಚೌ ಪೊಲೀಸ್ ಠಾಣೆ ವ್ಯಾಪ್ತಿಯ ನೇರ್ ಗ್ರಾಮದಲ್ಲಿ ಮಂಗಳವಾರ ಆಪಾದಿತ ಘಟನೆ ನಡೆದಿದ್ದು, ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಸಿನ್ಹ್ ಝಾಲಾ ತಿಳಿಸಿದ್ದಾರೆ.
“ಒಂದು ಗೋವಿಂದ್ ವಘೇಲಾ ಮತ್ತು ಇನ್ನೊಂದು ಅವರ ತಂದೆ ಜಗಭಾಯಿ ಅವರ ಕಡೆಯಿಂದ ಈ ಸಂಬಂಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಸುಮಾರು 20 ಜನರು ತಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಇಬ್ಬರೂ ಹೇಳಿದ್ದಾರೆ. ನಾವು ಅಪರಾಧಿಗಳನ್ನು ಹಿಡಿಯಲು ಎಂಟು ತಂಡಗಳನ್ನು ರಚಿಸಿದ್ದೇವೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಕನಾ ಅಹಿರ್, ರಾಜೇಶ್ ಮಹಾರಾಜ್, ಕೇಸ್ರಾ ರಬಾಯಿ, ಪಬಾ ರಾಬರಿ ಮತ್ತು ಕಾನಾ ಕೋಲಿ ಸೇರಿದಂತೆ 20 ಜನರ ಗುಂಪಿನ ವಿರುದ್ಧ ಕೊಲೆ ಯತ್ನ, ಡಕಾಯಿತಿ, ದರೋಡೆ, ಹಲ್ಲೆ ಮತ್ತು ಎಸ್ಸಿ/ಎಸ್ಸ್ಟಿ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:- ಗೋವಾವವನ್ನು ಕಲ್ಲಿದ್ದಲು ಗಣಿಗಾರಿಕೆ ಕೇಂದ್ರವನ್ನಾಗಿಸಲು ಬಿಡಲ್ಲ: ರಾಹುಲ್ ಗಾಂಧಿ
ಎಫ್ಐಆರ್ನ ಪ್ರಕಾರ, ಗೋವಿಂದ್ ವಘೇಲಾ ಮತ್ತು ಅವರ ಕುಟುಂಬ ಅಕ್ಟೋಬರ್ 20 ರಂದು ಪ್ರಾಣ ಪ್ರತಿಷ್ಠಾ ಆಚರಣೆ ನಡೆಯುತ್ತಿರುವಾಗ ಪ್ರಾರ್ಥನೆ ಸಲ್ಲಿಸಲು ನೇರ್ ಗ್ರಾಮದ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ಆರೋಪಿಗಳು ಕೋಪಗೊಂಡಿದ್ದರು ಎನ್ನಲಾಗಿದೆ.
ಅಕ್ಟೋಬರ್ 26 ರಂದು, ವಘೇಲಾ ತನ್ನ ಅಂಗಡಿಯಲ್ಲಿದ್ದಾಗ, ಕೆಲವು ವ್ಯಕ್ತಿಗಳು ತಮ್ಮ ಹೊಲಕ್ಕೆ ದನಗಳನ್ನು ಬಿಡುವ ಮೂಲಕ ಬೆಳೆದ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರ ಮತ್ತು ಅವರ ಚಿಕ್ಕಪ್ಪ ಗಣೇಶ್ ವಘೇಲಾ ಸ್ಥಳಕ್ಕೆ ಬಂದಾಗ, ಆರೋಪಿಗಳು ಪೈಪ್ಗಳು, ದೊಣ್ಣೆಗಳು ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಆರೋಪಿಗಳು ಮೊಬೈಲ್ ಫೋನ್ ಅನ್ನು ಕದ್ದಿದ್ದಾರೆ ಮತ್ತು ದೂರುದಾರರ ರಿಕ್ಷಾವನ್ನು ಹಾನಿಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.