ಪರಾರಿಯಾಗಲು ಯತ್ನ; ಪಾತಕಿ ದಾವೂದ್ ಸಹೋದರನ ಪುತ್ರನ ಬಂಧನ
Team Udayavani, Jul 18, 2019, 3:11 PM IST
ಮುಂಬೈ: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರನ ಪುತ್ರ ರಿಝ್ವಾನ್ ಕಸ್ಕರ್ ಮುಂಬೈ ಪೊಲೀಸರು ಬಂಧಿಸಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಭಾರತ ಬಿಟ್ಟು ತೆರಳಲು ಯತ್ನಿಸುತ್ತಿದ್ದ ರಿಝ್ವಾನ್ ನನ್ನು ಬುಧವಾರ ರಾತ್ರಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ರಿಝ್ವಾನ್ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಪುತ್ರ ಎಂದು ವಿವರಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸದಸ್ಯ ಫಾಹಿಂನ ಆಪ್ತ ಸಹಚರ ಅಹ್ಮದ್ ರಾಝಾ ವಾದ್ರಿಯಾನನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ರಿಝ್ವಾನ್ ಕಸ್ಕರ್ ಹೆಸರನ್ನು ಬಾಯ್ಬಿಟ್ಟಿರುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಮಾಹಿತಿ ಮೇರೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಿಝ್ವಾನ್ ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ವರದಿ ವಿವರಿಸಿದೆ.