ಸೇನೆಗೆ ಭರ್ಜರಿ ಅಸ್ತ್ರ
Team Udayavani, Sep 19, 2018, 5:27 PM IST
ಹೊಸದಿಲ್ಲಿ: ಭಾರತೀಯ ಸೇನೆಗೆ ಬಲ ತುಂಬಲು ಮುಂದಾಗಿರುವ ಕೇಂದ್ರ ಸರಕಾರ, 9,100 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿ ಮಾಡಲು ಒಪ್ಪಿಗೆ ನೀಡಿದೆ.
ಮಂಗಳವಾರ ನಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ(ಡಿಎಸಿ)ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮೇಡ್ ಇನ್ ಇಂಡಿಯಾ ಅಡಿಯಲ್ಲಿ ಭಾರತ್ ಡೈನಾಮಿಕ್ ಲಿಮಿಟೆಡ್ನಿಂದ ಆಕಾಶ್ ಕ್ಷಿಪಣಿ ವ್ಯವಸ್ಥೆಯ ಎರಡು ದಳಗಳನ್ನು ಖರೀದಿಸಲು ಒಪ್ಪಿಗೆ ನೀಡಲಾಗಿದೆ. ಟಿ90 ಟ್ಯಾಂಕ್ಗಳಿಗಾಗಿ ನೀರಿನೊಳಗೆ ಉಸಿರಾಟದ ವಿಶೇಷ ಉಪಕರಣ(ಐಯುಡಬ್ಲೂéಬಿಎ)ದ ವಿನ್ಯಾಸ ಮತ್ತು ಅಭಿವೃದ್ಧಿ ನಡೆಸುವುದಕ್ಕೂ ಈ ಮಂಡಳಿ ಅನುಮೋದನೆ ನೀಡಿದೆ.
ಹಿಂದಿನ ಆಕಾಶ್ ಕ್ಷಿಪಣಿ ವ್ಯವಸ್ಥೆಗೆ ಹೋಲಿಕೆ ಮಾಡಿದರೆ, ಈಗಿನದ್ದು ಸುಧಾರಿತವಾದದ್ದು. 360 ಡಿಗ್ರಿ ದೃಷ್ಟಿ ವ್ಯವಸ್ಥೆ ಹೊಂದಿರುವ ಇದರಿಂದ ವಿಶಾಲವಾದ ಉಪಯೋಗ ಪಡೆಯಬಹುದಾಗಿದೆ. ಇನ್ನು ನೀರಿನೊಳಗಿನ ಉಸಿರಾಟದ ವಿಶೇಷ ಉಪಕರಣವನ್ನು ಟ್ಯಾಂಕ್ಗಳಲ್ಲಿನ ಸಿಬ್ಬಂದಿ ಬಳಕೆ ಮಾಡುತ್ತಿದ್ದು, ನೀರಿನ ಆಳಕ್ಕೆ ಹೋದಾಗ ತೊಂದರೆಯಾದರೆ ರಕ್ಷಣೆಗಾಗಿ ಬೇಕಾಗುತ್ತದೆ. ಅಲ್ಲದೆ ಟಿ90 ಟ್ಯಾಂಕ್ಗಾಗಿ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಡಿಆರ್ಡಿಒ ವ್ಯವಸ್ಥೆ ಮಾಡುತ್ತಿದೆ. ಇದನ್ನು ಈ ಹಿಂದೆ ವಿದೇಶದಿಂದ ತರಿಸಿಕೊಳ್ಳಲಾಗುತ್ತಿದ್ದು, ಇದನ್ನು ದೇಶೀಯವಾಗಿಯೇ ಮೇಡ್ ಇನ್ ಇಂಡಿಯಾ ಅಡಿ ಡಿಆರ್ಡಿಒ ಅಭಿವೃದ್ಧಿ ಮಾಡುತ್ತಿದೆ.