ನೂಪುರ್ ಶರ್ಮಾಗೆ ಬೆದರಿಕೆ: ಭೀಮ್ ಸೇನಾ ಮುಖ್ಯಸ್ಥನ ಬಂಧನ
ಉಚ್ಛಾಟಿತ ಬಿಜೆಪಿ ನಾಯಕಿಯ ತಲೆಗೆ 1 ಕೋಟಿ ರೂ ಇನಾಮು ಘೋಷಿಸಿದ್ದ
Team Udayavani, Jun 17, 2022, 8:03 PM IST
ನವದೆಹಲಿ: ಉಚ್ಛಾಟಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಭೀಮಸೇನಾ ಮುಖ್ಯಸ್ಥ ನವಾಬ್ ಸತ್ಪಾಲ್ ತನ್ವಾರ್ ಅವರನ್ನು ದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದೆ.
ತನ್ವಾರ್ ಅವರನ್ನು ಗುರುವಾರ ಅವರ ಮನೆಯಿಂದ ಬಂಧಿಸಲಾಗಿದೆ. ಬಿಜೆಪಿ ಯುವ ನಾಯಕ ಸರ್ಪೋಪ್ರಿಯಾ ತ್ಯಾಗಿ ದೆಹಲಿ ಪೊಲೀಸರ ವಿಶೇಷ ಸೈಬರ್ ಸೆಲ್ಗೆ ದೂರು ನೀಡಿದ್ದರು. ಇದೇ ಬಂಧನಕ್ಕೆ ಆಧಾರವಾಗಿದೆ. ಕೆಲವು ದಿನಗಳ ಹಿಂದೆ ಹಿಂಸಾತ್ಮಕ ಚಟುವಟಿಕೆಗಳಿಗಾಗಿ ತನ್ವಾರ್ ಅವರನ್ನು ಗುರ್ಗಾಂವ್ ಪೊಲೀಸರು ಬಂಧಿಸಿದ್ದರು. ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ನೂಪುರ್ ಶರ್ಮಾಗೆ ಬೆದರಿಕೆ ಹಾಕಿ ಅವರ ತಲೆಗೆ ೧ ಕೋಟಿ ರೂ ಇನಾಮು ಘೋಷಿಸಿದ್ದ. ಇದೇ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದು ಅಶಾಂತಿಗೆ ಕಾರಣವಾಗಿತ್ತು.