ಉದ್ಧವ್-ಶಾ ಮಾತುಕತೆ ಧನಾತ್ಮಕ , ಆದರೂ ಶಿವಸೇನೆ ನಿಲುವು ಬದಲಿಲ್ಲ
Team Udayavani, Jun 7, 2018, 3:56 PM IST
ಮುಂಬಯಿ : ಉದ್ಧವ್ ಠಾಕ್ರೆ ಮತ್ತು ಅಮಿತ್ ಶಾ ನಡುವೆ ಸುಮಾರು ಎರಡು ತಾಸುಗಳ ಸ್ನೇಹ ಸೇತು ನಿರ್ಮಾಣದ ಮಾತುಕತೆ ನಡೆದಿರುವ ಹೊರತಾಗಿಯೂ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ ಮುಂದಿನ ಎಲ್ಲ ಚುನಾವಣೆಗಳಲ್ಲಿ ತಾನು ಏಕಾಂಗಿಯಾಗಿ ಹೋರಾಡಲಿದ್ದೇನೆ ಎಂದು ಶಿವಸೇನೆ ಇಂದು ಗುರುವಾರ ಹೇಳಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ನಡುವೆ ಧನಾತ್ಮಕ ಮಾತುಕತೆ ನಡೆದಿರುವ ಹೊರತಾಗಿಯೂ ಮುಂದಿನ ವರ್ಷದ ಮಹಾ ಚುನಾವಣೆ ಸಹಿತವಾಗಿ ಮುಂಬರುವ ಎಲ್ಲ ಚುನಾವಣೆಗಳನ್ನು ಏಕಾಂಗಿಯಾಗಿ ಹೋರಾಡುವ ತನ್ನ ಅಚಲ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಿವಸೇನೆ ಹೇಳಿತು.
ಮುಂದಿನ ಎಲ್ಲ ಚುನಾವಣೆಗಳನ್ನು ಏಕಾಂಗಿಯಾಗಿ ಹೋರಾಡುವ ಶಿವಸೇನೆಯ ನಿರ್ಧಾರದ ಮೇಲೆ ಹೊರಗಿನ ವ್ಯಕ್ತಿ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಶಿವಸೇನೆಯ ವಕ್ತಾರ, ಸಂಸದ ಸಂಜಯ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕಳೆದ ವಾರ ಬಿಜೆಪಿ ಗೆದ್ದಿರುವ ಏಕೈಕ ಸ್ಥಾನವಾಗಿರುವ ಪಾಲ್ಘರ್ನ ಚುನಾವಣೆಯಲ್ಲಿ ಬಿಜೆಪಿ – ಶಿವಸೇನೆಯ ಸಂಬಂಧಗಳು ಅತ್ಯಂತ ತಳ ಮಟ್ಟವನ್ನು ತಲುಪಿದ್ದವು.