ಕಾಶ್ಮೀರ ಸಮಸ್ಯೆಯನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸುತ್ತೇವೆ: ತಿರುಗೇಟು ನೀಡಿದ ಭಾರತ
ಅಮೇರಿಕಾದ 'ಮಧ್ಯಸ್ಥಿಕೆʼ ಬೇಡಿಕೆಯನ್ನು ತಳ್ಳಿಹಾಕಿದ ಭಾರತ
Team Udayavani, Aug 2, 2019, 11:26 AM IST
ಬ್ಯಾಂಕಾಕ್: ಭಾರತ ಮತ್ತು ಪಾಕಿಸ್ಥಾನದ ನಡುವಿನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ಸಾಹ ತೋರಿದ್ದ ಅಮೇರಿಕಾಗೆ ಭಾರತ ಉತ್ತರ ನೀಡಿದ್ದು, ಉಭಯ ದೇಶಗಳ ಸಮಸ್ಯೆಯನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸುತ್ತೇವೆ ಎಂದಿದೆ.
ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಈಸ್ಟ್ ಏಷ್ಯಾ ವಿದೇಶಾಂಗ ಸಚಿವರುಗಳ ಸಭೆಯಲ್ಲಿ ಅಮೇರಿಕಾ ವಿದೇಶಾಂಗ ಸಚಿವ ಮೈಕ್ ಪಾಂಪಿಯೋರನ್ನು ಭೇಟಿ ಮಾಡಿ ಮಾತನಾಡಿದ ಭಾರತದ ಸಚಿವ ಜೈಶಂಕರ್, ಅಮೇರಿಕಾದ ಮನವಿಯನ್ನು ತಳ್ಳಿ ಹಾಕಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್, ಇಂದು ಮುಂಜಾನೆ ಮೈಕ್ ಪಾಂಪಿಯೋ ಅವರನ್ನು ಭೇಟಿ ಮಾಡಿದ್ದೇನೆ. ಕಾಶ್ಮೀರ ಸಮಸ್ಯೆಯನ್ನು ಪಾಕಿಸ್ಥಾನದೊಂದಿಗೆ ನಾವು ದ್ವಿಪಕ್ಷೀಯವಾಗಿಯೇ ಬಗೆ ಹರಿಸುತ್ತೇವೆ ಎಂದು ಖಚಿತಪಡಿಸುತ್ತೇವೆ ಎಂದು ಪಾಂಪಿಯೋ ಅವರಿಗೆ ಸ್ಪಷ್ಟಪಡಿಸಿದ್ದೇನೆ ಎಂದರು.
ವಾರದ ಹಿಂದೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕ್ ಬಯಸಿದಲ್ಲಿ ಕಾಶ್ಮೀರ ವಿಚಾರದಲ್ಲಿ ತಾನು ಮಧ್ಯಸ್ಥಿಕೆ ವಹಿಸಲು ಸಿದ್ದವಿದ್ದೇನೆ ಎಂದು ಹೇಳಿಕೆ ನೀಡಿದ್ದರು.