ಕಾಂಗ್ರೆಸ್ ಸಭೆಯಲ್ಲಿ ಭಿನ್ನಾಭಿಪ್ರಾಯ ಸ್ಪೋಟ: ರಾಹುಲ್ ಬೆನ್ನಿಗೆ ನಿಂತ ರಮ್ಯಾ ಹೇಳಿದ್ದೇನು?
Team Udayavani, Aug 24, 2020, 1:41 PM IST
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ನಾಯಕತ್ವದ ಕುರಿತಾಗಿ ಇಂದು ನಡೆದ ಕಾರ್ಯಕಾರಣಿ ಸಭೆಯಲ್ಲಿ ಅಸಮಧಾನ ಸ್ಪೋಟವಾಗಿದೆ. ನಾಯಕತ್ವದ ಕುರಿತಾಗಿ ಪಕ್ಷದ 23 ಹಿರಿಯ ನಾಯಕರು ಸೋನಿಯಾ ಗಾಂಧಿಗೆ ಬರೆದಿರುವ ಪತ್ರದ ಕುರಿತಾಗಿ ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕರು ಪತ್ರ ಬರೆದಿದ್ಯಾಕೆ? ಬರೆದಿದ್ದರೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾಕೆ? ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂದು ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಸಭೆಯಲ್ಲಿ ಆರೋಪಿಸಿದ್ದಾರೆ ಎನ್ನಲಾಗಿದೆ.
ರಾಹುಲ್ ಆರೋಪಕ್ಕೆ ಗುಲಾಬ್ ನಬೀ ಆಜಾದ್, ಕಪಿಲ್ ಸಿಬಲ್ ಮುಂತಾದ ಕಾಂಗ್ರೆಸ್ ಹಿರಿಯ ನಾಯಕರು ಕೆಂಡಾಮಂಡಲರಾಗಿದ್ದಾರೆ ಎಂದು ವರದಿಯಾಗಿದೆ. ಆರೋಪ ಸಾಬೀತಾದರೆ ನಾನು ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಲಾಬ್ ನಬೀ ಆಜಾದ್ ತಮ್ಮ ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 1998-99ರಲ್ಲಿಯೂ ಕಾಂಗ್ರೆಸ್ ಇದೇ ಸ್ಥಿತಿ ಅನುಭವಿಸಿತ್ತು…ಅಂದು ಘಟಾನುಘಟಿ ನಾಯಕರ ರಾಜೀನಾಮೆ!
ರಾಹುಲ್ ಬೆನ್ನಿಗೆ ನಿಂತ ರಮ್ಯಾ
ಇಷ್ಟೆಲ್ಲಾ ಚರ್ಚೆ, ಸುದ್ದಿಗಳ ನಡುವೆ ದಿವ್ಯ ಸ್ಪಂದನ ರಮ್ಯಾ ಟ್ವೀಟ್ ಮಾಡಿದ್ದು, ಅವರುಗಳು ಕೇವಲ ಪತ್ರವನ್ನು ಮಾತ್ರ ಮಾಧ್ಯಮಗಳಿಗೆ ಲೀಕ್ ಮಾಡಿದ್ದಲ್ಲಾ, ಸಭೆಯಲ್ಲಿ ಚರ್ಚೆಯಾಗುತ್ತಿರುವ ಕ್ಷಣ ಕ್ಷಣದ ವಿಚಾರ/ ಸಂಭಾಷಣೆಯನ್ನೂ ಅವರು ಮಾಧ್ಯಮಗಳಿಗೆ ನೀಡುತ್ತಿದ್ದಾರೆ. ಅದ್ಭುತ ಎಂದು ಹೇಳಿದ್ದಾರೆ. ಈ ಮೂಲಕ ರಾಹುಲ್ ಮೇಲೆ ಅಸಮಧಾನಗೊಂಡಿರುವ ಕೈ ಹಿರಿಯರ ವಿರುದ್ಧ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.