ಡಿ.ಕೆ. ಶಿವಕುಮಾರ್ ತಾಯಿ, ಪತ್ನಿಗೆ ಕೊಂಚ ನಿರಾಳ
Team Udayavani, Oct 17, 2019, 3:05 AM IST
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ರವರ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್, ಸದ್ಯಕ್ಕೆ ತನ್ನ ಮುಂದೆ ವಿಚಾರಣೆಗೆ ಹಾಜರಾಗುವುದು ಬೇಕಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.), ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಇದರಿಂದಾಗಿ, ಅವರಿಬ್ಬರಿಗೂ ಕೊಂಚ ನಿರಾಳತೆ ಸಿಕ್ಕಿದೆ. ಡಿಕೆಶಿ ವಿರುದ್ಧದ ಪ್ರಕರಣದಲ್ಲಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ರವರಿಗೆ ದೆಹಲಿಯಲ್ಲಿನ ತನ್ನ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸೋಮವಾರ ಸಮನ್ಸ್ ಜಾರಿಗೊಳಿಸಿತ್ತು. ಅದರಂತೆ, ಮಂಗಳವಾರ ಗೌರಮ್ಮ ಹಾಗೂ ಗುರುವಾರ (ಅ. 17) ಉಷಾ ಅವರು ಇ.ಡಿ. ಕಚೇರಿಗೆ ಹಾಜರಾಗಬೇಕಿತ್ತು.
ಆದರೆ, ಗೌರಮ್ಮ ಅವರು ಮಂಗಳವಾರ ವಿಚಾರಣೆಗೆ ಹಾಜರಾಗಿರಲಿಲ್ಲ. ಆದರೆ, ಗೌರಮ್ಮ ಹಾಗೂ ಉಷಾ ಅವರು, ಇ.ಡಿ. ನೀಡಿರುವ ಸಮನ್ಸ್ ಗಳ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ಇ.ಡಿ. ಅಭಿಪ್ರಾಯವನ್ನು ಕೇಳಿತ್ತು.
ಬುಧವಾರ, ಹೈಕೋರ್ಟ್ಗೆ ತನ್ನ ವಿವರಣೆ ಸಲ್ಲಿಸಿದ ಇ.ಡಿ., “ಸದ್ಯದ ಮಟ್ಟಿಗೆ ಗೌರಮ್ಮ, ಉಷಾ, ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ. ಆದರೆ, ಮುಂದೆ ಇಬ್ಬರಿಗೂ ಒಂದು ವಾರದ ಅಂತರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಹೊಸ ಸಮನ್ಸ್ ಜಾರಿಗೊಳಿಸಲಾಗುತ್ತದೆ” ಎಂದು ತಿಳಿಸಿದೆ. ಇ.ಡಿ. ವಿವರಣೆ ಕೇಳಿದ ಹೈಕೋರ್ಟ್, ಈ ಪ್ರಕರಣದ ವಿಚಾರಣೆಯನ್ನು ಅ. 21ಕ್ಕೆ ಮುಂದೂಡಿದೆ.