ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳ ಆರಂಭ ಬೇಡ
ಮುಂದಿನ ತಿಂಗಳಿಂದ ಶಾಲೆ ತೆರೆಯುವ ಕೇಂದ್ರದ ನಿರ್ಧಾರಕ್ಕೆ ಆಕ್ಷೇಪ
Team Udayavani, Jun 2, 2020, 7:42 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ದೇಶದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನಾರಂಭಿಸಬಾರದು. ಪರಿಸ್ಥಿತಿ ಸುಧಾರಿಸುವವರೆಗೆ ಅಥವಾ ಲಸಿಕೆ ಕಂಡು ಹಿಡಿಯುವವರೆಗೆ ಶಾಲೆಗಳನ್ನು ತೆರೆಯಲು ಅವಕಾಶ ನೀಡಬಾರದು’ ಎಂಬ ಅಭಿಯಾನಕ್ಕೆ ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಪೋಷಕರು ಸಹಿ ಹಾಕಿದ್ದಾರೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜುಲೈಯಲ್ಲಿ ಶಾಲಾ ಕಾಲೇಜು, ಕೋಚಿಂಗ್ ಸೆಂಟರ್ಗಳನ್ನು ತೆರೆಯಬಹುದು ಎಂದು ಕೇಂದ್ರ ಸರಕಾರ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ.
“ಕೇಂದ್ರ ಸರಕಾರದ ಈ ನಿರ್ಧಾರ ಸರಿಯಲ್ಲ. ಇದರಿಂದ ಮಕ್ಕಳು ತೊಂದರೆಗೆ ಸಿಲುಕಬೇಕಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇ-ಕಲಿಕೆಗೆ ಆದ್ಯತೆ ನೀಡಬೇಕು. ವರ್ಚ್ಯುಯಲ್ ತರಗತಿಗಳನ್ನು ಮುಂದುವರಿಸಬೇಕು’ ಎಂದು ಅಭಿಯಾನದಲ್ಲಿ ಉಲ್ಲೇಖೀಸಲಾಗಿದೆ. ಇದಕ್ಕೆ ದೇಶಾದ್ಯಂತ 2.13 ಲಕ್ಷ ಪೋಷಕರು ಸಹಿ ಹಾಕಿದ್ದಾರೆ. ಮಕ್ಕಳು ಮನೆಯಲ್ಲಿದ್ದರೆ ನಾವು ನಿಗಾ ವಹಿಸುತ್ತೇವೆ. ಆದರೆ, ಶಾಲೆಗೆ ಹೋದರೆ ಊಟದ ವಿರಾಮದ ವೇಳೆ, ಶಾಲಾ ಬಸ್ಗಳಲ್ಲಿ ಯಾರು ಕಾಳಜಿ ವಹಿಸುತ್ತಾರೆ?, ಈ ತೀರ್ಮಾನ ಪ್ರತಿಯೊಬ್ಬರಲ್ಲೂ ಭೀತಿ ಹುಟ್ಟಿಸುತ್ತದೆ.
ಕೋವಿಡ್ ಸಂಖ್ಯೆ ಏರಿಕೆಯಾದರೆ ಮತ್ತಷ್ಟು ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಪೋಷಕರಾದ ಸ್ವಾತಿ ಭಾರದ್ವಜ್ ಅಳಲು ತೋಡಿಕೊಂಡಿದ್ದಾರೆ.