ದೇಗುಲಗಳ ಚಿನ್ನ ಕರಗಿಸುವ ನಿರ್ಧಾರ ಬೇಡ: ಹೈಕೋರ್ಟ್
Team Udayavani, Oct 29, 2021, 7:10 AM IST
ಚೆನ್ನೈ: ತಮಿಳುನಾಡಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇಗುಲಗಳಲ್ಲಿರುವ ಚಿನ್ನ ಕರಗಿಸುವ ಬಗ್ಗೆ ಅಲ್ಲಿನ ರಾಜ್ಯ ಸರಕಾರದ ಪ್ರಸ್ತಾವಕ್ಕೆ ಮದ್ರಾಸ್ ಹೈಕೋರ್ಟ್ ಗುರುವಾರ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ದೇಗುಲಗಳ ಆಡಳಿತ ಮಂಡಳಿಗಳಿಗೆ ಟ್ರಸ್ಟಿಗಳನ್ನು ಮೊದಲು ನೇಮಕ ಮಾಡಬೇಕು. ಅನಂತರವೇ ಚಿನ್ನ ಕರಗಿಸಿ ಗಟ್ಟಿಗಳನ್ನಾಗಿ ಮಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾ| ಪಿ. ಡಿ. ಆದಿಕೇಶವುಲು ಅವರನ್ನೊಳಗೊಂಡ ನ್ಯಾಯಪೀಠ ಆದೇಶ ನೀಡಿದೆ. ಆದರೆ ದೇಗುಲಗಳಲ್ಲಿ ದೇವರ ಆಭರಣಗಳನ್ನು ಪರಿಶೀಲಿಸಿ, ನೋಂದಣಿಯಲ್ಲಿ ನಮೂದಿಸುವ ಪ್ರಕ್ರಿಯೆ ಮುಂದು ವರಿಯಬೇಕು ಎಂದು ಸ್ಪಷ್ಟಪಡಿಸಿದೆ.
ದೇಗುಲಗಳ ವ್ಯಾಪ್ತಿಯಲ್ಲಿರುವ ಚಿನ್ನ ಕರಗಿಸಿ ಗಟ್ಟಿಗಳನ್ನಾಗಿ ಮಾಡಿ ಸರಕಾರಿ ಬ್ಯಾಂಕ್ಗಳಲ್ಲಿ ಠೇವಣಿ ಇರಿಸುವ ಬಗ್ಗೆ ಹೊರಡಿಸಲಾಗಿದ್ದ ಸರಕಾರಿ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೊಕದ್ದಮೆ ವಿಚಾರಣೆ ನಡೆಸಿ ನ್ಯಾಯಪೀಠ ಈ ಆದೇಶ ನೀಡಿದೆ. ಅರ್ಜಿದಾರರಾಗಿರುವ ಇಂಡಿಕ್ ಕಲೆಕ್ಟಿವ್ ಟ್ರಸ್ಟ್ನ ಅಧಕ್ಷ ಟಿ.ಆರ್.ರಮೇಶ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ದೇಗುಲದ ಆಡಳಿತ ಟ್ರಸ್ಟಿಗಳ ವ್ಯಾಪ್ತಿಯಲ್ಲಿರು ತ್ತದೆ. ಸದ್ಯ ಟ್ರಸ್ಟಿಗಳ ನೇಮಕವಾಗಿಲ್ಲ. ಹೀಗಾಗಿ ಸರಕಾರದ ಆದೇಶ ಸರಿಯಾದ್ದಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.