ರೋಗಿಗಾಗಿ ಕಾರಿನಲ್ಲಿ 540 ಕಿ.ಮೀ. ಸಂಚರಿಸಿದ ವೈದ್ಯ!; ಕೋಲ್ಕತಾದ ವೈದ್ಯರ ಸಾಹಸ
ಜಾರ್ಖಂಡ್ ಗಡಿ ಬಳಿಕ ಇರುವ ಗ್ರಾಮಕ್ಕೆ ಡ್ರೈವಿಂಗ್
Team Udayavani, Apr 7, 2020, 3:43 PM IST
ಕೊಲ್ಕೊತ್ತಾ: ಚಿಕಿತ್ಸೆಗೊಳಗಾಗಿದ್ದ ಬಾಲಕಿ ಹಾಗೂ ಆಕೆಯ ತಂದೆಯನ್ನು ವೈದ್ಯರೊಬ್ಬರು ತಮ್ಮದೇ ಕಾರಿನಲ್ಲಿ ಹತ್ತಿಸಿಕೊಂಡು 270 ಕಿ.ಮೀ. ದೂರದಲ್ಲಿದ್ದ ಅವರ ಮನೆಗೆ ಸುರಕ್ಷಿತವಾಗಿ ಸೇರಿಸಿ, ವೈದ್ಯರೊಬ್ಬರು ಔದಾರ್ಯ ಮೆರೆದಿದ್ದಾರೆ.
ಕೋಲ್ಕತಾದ ಎಸ್.ಎಸ್.ಕೆ.ಎಂ. ಆಸ್ಪತ್ರೆಗೆ ದಾಖಲಾಗಿದ್ದ 8 ವರ್ಷದ ಬಾಲಕಿಗೆ ಕರುಳಿನ ಚಿಕಿತ್ಸೆ ನೀಡಿ ಡಿಸಾcರ್ಜ್ ಮಾಡಲಾಗಿತ್ತು. ಈ ವೇಳೆ ಲಾಕ್ಡೌನ್ ಘೋಷಿಸಿದ್ದರಿಂದ ಆಕೆ ತಂದೆ ರಾಜೇಶ್ ಬಸ್ಕೆ, ಊರು ಸೇರಲು ಆ್ಯಂಬುಲೆನ್ಸ್ ಚಾಲಕನನ್ನು ಸಂಪರ್ಕಿಸಿದಾಗ, ದುಬಾರಿ ಹಣ ಕೇಳಿದ್ದರು. ದಿನಗೂಲಿ ನೌಕರರಾಗಿದ್ದರಿಂದ ಅವರು ಈ ಹಣವನ್ನು ಭರಿಸಲಾಗದೇ ಅಸಹಾಯಕರಾಗಿ ನಿಂತಿದ್ದರು. ಈ ದೃಶ್ಯವು ಆಸ್ಪತ್ರೆ ವೈದ್ಯ ಡಾ| ಬಬ್ಲು ಸರ್ದಾರ್ ಮನಕಲಕಿತು.
ಮರುದಿನ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ಹೋಗಬೇಕಿತ್ತು. ಆದರೂ ಕೂಡ ಸಂಜೆ 6 ಗಂಟೆಗೆ ಆಸ್ಪತ್ರೆ ಬಿಟ್ಟ ವೈದ್ಯರು ಮಧ್ಯರಾತ್ರಿ 3 ಗಂಟೆಗೆ ಬಾಲಕಿಯ ತವರು ಬಿರ್ಬೂಮ್ ತಲುಪಿದ್ದಾರೆ. ಈ ಗ್ರಾಮ ಝಾರ್ಖಂಡ್ ಗಡಿಯಲ್ಲಿದೆ. ಊಟವನ್ನೂ ಮಾಡದೇ ತಮ್ಮದೇ ಖರ್ಚಿನಲ್ಲಿ ರೋಗಿಯನ್ನು ಅಷ್ಟು ದೂರದ ಮನೆಗೆ ತಲುಪಿಸಿ ಹೃದಯ ವೈಶಾಲ್ಯ ತೋರಿದ್ದಾರೆ.
ಮರುದಿನ ಡಾ| ಬಬ್ಲು ಸರ್ದಾರ್ ಆಸ್ಪತ್ರೆ ತಲುಪಿದಾಗ ಅವರ ಕಾರು 540 ಕಿ.ಮೀ. ಸಂಚರಿಸಿತ್ತು. ಈ ವೈದ್ಯರು ತಮಗೆ ದೇವರಿದ್ದಂತೆ ಎಂದು ಬಾಲಕಿಯ ತಂದೆ ಗುಣಗಾನ ಮಾಡಿದ್ದಾರೆ.