ಲಾಕ್ ಡೌನ್ ವೇಳೆ ಧಾರ್ಮಿಕ ಮೆರವಣಿಗೆ, ಹಬ್ಬ, ಜಾತ್ರೆಗಳಿಗೆ ಅವಕಾಶವಿಲ್ಲ:ರಾಜ್ಯಗಳಿಗೆ ಕೇಂದ್ರ
ಆಕ್ಷೇಪಾರ್ಹ ಸಂಗತಿ, ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು
Team Udayavani, Apr 10, 2020, 6:29 PM IST
Representative Image
ನವದೆಹಲಿ: ಕೋವಿಡ್ 19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಘೋಷಿಸಿರುವ 21 ದಿನಗಳ ಕಾಲದ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದ್ದು, ಈ ಸಂದರ್ಭದಲ್ಲಿ ಯಾವುದೇ ಮೆರವಣಿಗೆ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸೂಚನೆ ನೀಡಿದೆ.
ಕೋವಿಡ್ ಗೆ ಸಂಬಂಧಿಸಿದ ಯಾವುದೇ ಆಕ್ಷೇಪಾರ್ಹ ಸಂಗತಿ, ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಕೇಂದ್ರ ಗೃಹ ಸಚಿವಾಲಯ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ವರದಿ ಹೇಳಿದೆ.
ಏಪ್ರಿಲ್ ತಿಂಗಳಲ್ಲಿ ಹಬ್ಬ, ಜಾತ್ರೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಅಥವಾ ಮೆರವಣಿಗೆಗೆ ಅವಕಾಶ ನೀಡದೆ ಕೋವಿಡ್ 19 ವಿರುದ್ಧ ಹೋರಾಡಲು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ ತಿಂಗಳಿನಲ್ಲಿ ಶಾಬ್ ಎ ಬರಾತ್, ಗುಡ್ ಫ್ರೈಡೇ, ಬೈಸಾಖಿ, ರೋಂಗ್ಲಿ ಬಿಹು, ವಿಶು, ಪೋಯ್ಲಾ ಬೋಯಿಸಾಖ್, ಮಹಾ ವಿಶುಭಾ ಸಂಕ್ರಾಂತಿ ಸೇರಿದಂತೆ ಹಲವು ಹಬ್ಬಗಳು ಇವೆ. ಆದರೆ ಯಾವುದೇ ಧಾರ್ಮಿಕ, ಸಾಮಾಜಿಕ ಕಾರ್ಯಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ತಿಳಿಸಿದೆ.