ಎಮರ್ಜೆನ್ಸಿ ಲಸಿಕೆ ಶೀಘ್ರ ರೆಡಿ; ಸಿಹಿಸುದ್ದಿ ನೀಡಿದ ಸೀರಂ ಸಿಇಒ
ಕೊವ್ಯಾಕ್ಸ್ ಪ್ರಗತಿಗೆ ಮೋದಿ ಖುಷ್
Team Udayavani, Nov 29, 2020, 6:32 AM IST
ಪುಣೆಯಲ್ಲಿ ಸೀರಂ ಇನ್ಸ್ಟಿಟ್ಯೂಟ್ನ ನಕ್ಷೆ ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ.
ಪುಣೆ/ಅಹ್ಮದಾಬಾದ್: “2021ರ ಜುಲೈ ವೇಳೆ 30-40 ಕೋಟಿ ಡೋಸ್ ಲಸಿಕೆ ಉತ್ಪಾದನೆಯ ಗುರಿ ತಲುಪುತ್ತೇವೆ. ಆದರೆ ಅದಕ್ಕೂ ಮೊದಲು, ಇನ್ನೆರಡು ವಾರಗಳಲ್ಲಿ ತುರ್ತು ಬಳಕೆಗೆಗೆ ಅಗತ್ಯವಿರುವ ಲಸಿಕೆಗಳನ್ನು ಸಿದ್ಧಗೊಳಿಸುತ್ತೇವೆ!’
– ಇಲ್ಲಿನ ಸೀರಮ್ ಇನ್ಸ್ಟಿಟ್ಯೂಟ್ಗೆ ಪ್ರಧಾನಿ ಭೇಟಿ ಕೊಟ್ಟ ಬೆನ್ನಲ್ಲೇ, ಕೋವಿಶೀಲ್ಡ್ ಲಸಿಕೆ ಪ್ರಗತಿ ಬಗ್ಗೆ ಅಧಿಕೃತ ಸಿಹಿಸುದ್ದಿಯನ್ನು ಸಂಸ್ಥೆಯ ಸಿಇಒ ಅಡಾರ್ ಪೂನಾವಾಲಾ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಆಕ್ಸ್ಫರ್ಡ್ ವಿವಿ ಮತ್ತು ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತದಲ್ಲಿ ಸೀರಮ್ ಸಂಸ್ಥೆ ದೇಶೀಯವಾಗಿ ಉತ್ಪಾದಿಸುತ್ತಿದೆ.
ಪ್ರಗತಿ ಹೇಗಿದೆ?: “ಲಸಿಕೆ 3ನೇ ಹಂತದ ಪರೀಕ್ಷೆಯಲ್ಲಿದೆ. 18 ವರ್ಷದೊಳಗಿನವರ ಮೇಲಿನ ಪ್ರಯೋಗದ ಕಾರಣಕ್ಕಾಗಿ ಕೋವಿಶೀಲ್ಡ್ ಪ್ರಗತಿ ಕೊಂಚ ನಿಧಾನಗೊಳ್ಳುತ್ತಿದೆ. ವಯಸ್ಕರರ ಫಲಿತಾಂಶದೊಂದಿಗೆ ನಾವು ಸಂಪೂರ್ಣ ಸಿದ್ಧರಾಗುತ್ತೇವೆ. ಜನವರಿ- ಫೆಬ್ರವರಿ ವೇಳೆಗೆ 1-1.5 ಕೋಟಿ ಡೋಸ್ ಲಸಿಕೆ ಉತ್ಪಾದಿಸಲಿದ್ದೇವೆ. ಏಪ್ರಿಲ್- ಮೇ ಹೊತ್ತಿಗೆ 10 ಕೋಟಿ ಡೋಸ್ ಗುರಿ ಸಾಧಿಸುತ್ತೇವೆ. ಆರೋಗ್ಯ ಸಚಿವಾಲಯ ಜೂನ್ಗೆ 20-30 ಕೋಟಿ ಡೋಸ್ ಲಸಿಕೆಯ ನಿರೀಕ್ಷೆಯಿಟ್ಟಿದೆ’ ಎಂದಿದ್ದಾರೆ. ಇದಕ್ಕೂ ಮೊದಲು ನಾವು ತುರ್ತು ಪ್ರಕರಣಗಳ ಬಳಕೆಗಾಗಿ ಶೀಘ್ರ ಲಸಿಕೆ ಪೂರೈಸಲಿದ್ದೇವೆ. ಇದಕ್ಕಾಗಿ ತುರ್ತು ಪರವಾನಿಗೆ ಪಡೆಯುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಕೋವಿಶೀಲ್ಡ್ ಪರಿಣಾಮಕಾರಿ: “ಇಲ್ಲಿಯವರೆಗಿನ ಫಲಿತಾಂಶಗಳಲ್ಲಿ ಲಸಿಕೆ ಪಡೆದ ಪ್ರತಿನಿಧಿಗಳಲ್ಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಸೋಂಕಿನ ಹಬ್ಬುವಿಕೆಯನ್ನು ಶೇ.60ರಷ್ಟು ತಗ್ಗಿಸುವ ಸಾಮರ್ಥ್ಯ ಲಸಿಕೆಗಿದೆ’ ಎಂದು ಹೇಳಿದ್ದಾರೆ.
ಪ್ರಧಾನಿ ಖುಷ್: “ಕೋವಿಶೀಲ್ಡ್ ಲಸಿಕೆಯ ಪ್ರಗತಿ, ಸಾಮರ್ಥ್ಯವನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿದ್ದೇವೆ. ಲಸಿಕೆಯ ಕಾರ್ಯವಿಧಾನ ಅವರನ್ನು ಬಹಳ ಪ್ರಭಾವಿಸಿದೆ. ಲಸಿಕೆ ಸರಬರಾಜಿನ ವ್ಯವಸ್ಥೆ ಕುರಿತೂ ಮೋದಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ಮೊದಲು ಭಾರತಕ್ಕೆ ಲಸಿಕೆ ಪೂರೈಸುತ್ತೇವೆ. ಅನಂತರ ಇತರ ರಾಷ್ಟ್ರಗಳಿಗೆ ಒದಗಿಸುತ್ತೇವೆ’ ಎಂದರು.
ಒಣಗಿದ ಶ್ಲೇಷ್ಮದಿಂದಲೂ ಟೆಸ್ಟ್
ಇಷ್ಟು ದಿನ ಕೊರೊನಾದ ಆರ್ಟಿ- ಪಿಸಿಆರ್ ಟೆಸ್ಟ್ನಲ್ಲಿ ಮೂಗಿನ ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುತ್ತಿತ್ತು. ಪ್ರಸ್ತುತ ಭಾರತೀಯ ಔಷಧೀಯ ಸಂಶೋಧನ ಮಂಡಳಿಯು “ಒಣಗಿದ ಶ್ಲೇಷ್ಮ’ ಪರೀಕ್ಷೆ ಮೂಲಕ ಡ್ರೈ ಸ್ವಾéಬ್ ಟೆಸ್ಟ್ಗೆ ಅನುಮೋದನೆ ಸೂಚಿಸಿದೆ. ಒಣಗಿದ ಶ್ಲೇಷ್ಮ ಕೂಡ ಕೊರೊನಾ ಪ್ರಸರಣದ ಪ್ರಮುಖ ಮಾಧ್ಯಮವಾಗಿರುವುದರಿಂದ, ಇದು ಆರ್ಟಿ-ಪಿಸಿಆರ್ ಟೆಸ್ಟ್ನ ವೆಚ್ಚ ಮತ್ತು ಕಾಲಮಿತಿಯನ್ನು ತಗ್ಗಿಸಲಿದೆ. ಕೈಗಾರಿಕ ಸಂಶೋಧನೆ ಮತ್ತು ವಿಜ್ಞಾನ ಮಂಡಳಿ (ಸಿಎಸ್ಐಆರ್) ತಜ್ಞರು ಈ ಕಾರ್ಯವಿಧಾನ ಪರಿಚಯಿಸಿದ್ದಾರೆ.
ಟಾಪ್ 8ರಲ್ಲಿಲ್ಲ ಕರ್ನಾಟಕ
ದೇಶದ ಒಟ್ಟು ಸೋಂಕಿನ ಕೊಡುಗೆಗೆ 8 ರಾಜ್ಯಗಳ ಪಾಲು ಶೇ.69ರಷ್ಟಿದೆ ಎಂದು ಆರೋಗ್ಯ ಇಲಾಖೆ ಆತಂಕ ಸೂಚಿಸಿದೆ. ಟಾಪ್ 8 ರಾಜ್ಯಗಳಲ್ಲಿ ಮಹಾರಾಷ್ಟ್ರ, ದಿಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕ ಸ್ಥಾನ ಪಡೆಯ ದಿರುವುದು ಸಮಾಧಾನಕರ ಸಂಗತಿ.
ಲಕ್ಸೆಂಬರ್ಗ್ ಸಂಸ್ಥೆಗೆ ಬಾಕ್ಸ್ ನಿರ್ಮಾಣ ಹೊಣೆ
ಶೈತ್ಯೀಕರಿಸಿದ ಲಸಿಕೆ ಸಾಗಾಟ ಬಾಕ್ಸ್ಗಳನ್ನು ಸಿದ್ಧಪಡಿಸಲು ಮೋದಿ, ಲಕ್ಸೆಂಬರ್ಗ್ನ ಹೆಸರಾಂತ ಸಂಸ್ಥೆಗೆ ಹೊಣೆ ವಹಿಸಿದ್ದಾರೆ. ಜಗತ್ತಿನ ಅತ್ಯುತ್ತಮ ದರ್ಜೆಯ ಲಸಿಕೆ ಸಂಗ್ರಾಹಕಗಳನ್ನು ನಿರ್ಮಿಸುವ ಲಕ್ಸೆಂಬರ್ಗ್ನ “ಬಿ ಮೆಡಿಕಲ್ ಸಿಸ್ಟಮ್ಸ್’ ಸಂಸ್ಥೆಯ ತಜ್ಞರ ತಂಡ ಮುಂದಿನ ವಾರದಲ್ಲಿ ಗುಜರಾತ್ಗೆ ಆಗಮಿಸಲಿದೆ. ಇಲ್ಲಿಂದ ದೇಶದ ಮೂಲೆ ಮೂಲೆಗಳಿಗೆ ಲಸಿಕೆ ಸರಬರಾಜು ಮಾಡಲು ಅಗತ್ಯವಿರುವ ಶೈತ್ಯೀಕರಣ ವ್ಯವಸ್ಥೆಯುಳ್ಳ ಸಾಗಾಟ ಬಾಕ್ಸ್ಗಳನ್ನು ಬಿ ಮೆಡಿಕಲ್ ಸಿಸ್ಟಮ್ಸ್ ನಿರ್ಮಿಸಲಿದೆ. ಇವು ಸಂಪೂರ್ಣ ಸೋಲಾರ್ ಆಧಾರಿತ ಶೈತ್ಯೀಕರಣ ವ್ಯವಸ್ಥೆಯಾಗಿದ್ದು, ಪ್ರತಿ ಬಾಕ್ಸ್ಗಳು 4 ಡಿಗ್ರಿಯಿಂದ -20 ಡಿಗ್ರಿ ಸೆಲ್ಸಿಯಸ್ವರೆಗೆ ಲಸಿಕೆ ಶೈತ್ಯೀಕರಿಸಿ, ಸಂರಕ್ಷಿಸುವ ಸಾಮರ್ಥ್ಯ ಹೊಂದಿರಲಿವೆ.