“ಥಳಿಸಿ ಹತ್ಯೆ’ಗೆ ಕಡಿವಾಣ ಹಾಕಿ: ಪ್ರಧಾನಿಗೆ ಆಗ್ರಹ
Team Udayavani, Jul 25, 2019, 5:00 AM IST
ಕೋಲ್ಕತಾ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಥಳಿತ ಹತ್ಯೆಗಳು, ಹಿಂಸಾಚಾರಗಳು ನಿಲ್ಲಬೇಕು ಎಂದು ಆಗ್ರಹಿಸಿ, ದೇಶದ ನಾನಾ ಕ್ಷೇತ್ರಗಳ 49 ಖ್ಯಾತ ವ್ಯಕ್ತಿಗಳು ಪ್ರಧಾನಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಜು. 23ರಂದು ಕಳುಹಿಸಲಾದ ಈ ಪತ್ರಕ್ಕೆ ಚಿತ್ರ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಅಪರ್ಣ ಸೇನ್, ಶಾಸ್ತ್ರೀಯ ಸಂಗೀತ ಗಾಯಕಿ ಶುಭಾ ಮುದ್ಗಲ್, ಇತಿಹಾಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರ ತಜ್ಞ ಆಶಿಸ್ ನಂದಿ ಮುಂತಾದವರು ಸಹಿ ಹಾಕಿದ್ದಾರೆ. “ಜೈ ಶ್ರೀರಾಮ್’ ನಾಮಘೋಷವು ಇಂದು ಹಿಂಸಾಚಾರ, ಶೋಕದ ಮೂಲಮಂತ್ರವೆನಿಸಿದೆ. ಶಾಂತಿ ಪ್ರಿಯರೂ, ಹೆಮ್ಮೆಯ ಭಾರತೀಯರೂ ಆಗಿರುವ ನಮ್ಮಲ್ಲಿ, ನಮ್ಮ ಪ್ರೀತಿಯ ಭಾರತದಲ್ಲಿ ಧರ್ಮಾಧಾರಿತ ಹಿಂಸಾಚಾರಗಳು ಆತಂಕ ಸೃಷ್ಟಿಸಿವೆ. ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾಕರ ಮೇಲಿನ ಥಳಿತ ಹತ್ಯೆಗಳು ನಿಲ್ಲಲೇಬೇಕು’ ಎಂದು ಆಗ್ರಹಿಸಿದ್ದಾರೆ.
ಸರಕಾರದ ಸ್ಪಷ್ಟನೆ: ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಮುಖಾ¤ರ್ ಅಬ್ಟಾಸ್ ನಖ್ವಿ, “ಮೋದಿ ಯವರ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾಕರು ಸುರಕ್ಷಿತವಾಗಿದ್ದಾರೆ’ ಎಂದಿದ್ದಾರೆ. ಅಲ್ಲದೆ, ದೇಶದಲ್ಲಿ ನಡೆಯುವ ಕ್ರಿಮಿನಲ್ ಅಪರಾಧಗಳಿಗೆ ಧರ್ಮ, ಸಮುದಾಯದ ಬಣ್ಣ ಹಚ್ಚುವ ಕೆಲಸ ಆಗಬಾರದು ಎಂದು ಹೇಳಿದ್ದಾರೆ.