ಈಗಲೂ ಪ್ರಧಾನಿ ನರೇಂದ್ರ ಮೋದಿಗೆ ಅಮ್ಮನಿಂದ ಬರುತ್ತಂತೆ ಹಣ!
Team Udayavani, Apr 25, 2019, 6:00 AM IST
ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಅಪರೂಪದ ಖಾಸಗಿ ಬದುಕಿನ ಸಂದರ್ಶನ ನೀಡಿದ್ದಾರೆ. ಅಮ್ಮ ಮತ್ತು ತಮ್ಮ ನಡುವಿನ ಸಂಬಂಧ, ವಿಪಕ್ಷಗಳ ನಾಯಕರ ಜತೆಗಿನ ಬಾಂಧವ್ಯ, ನಿದ್ದೆ, ಕೆಲಸ ಇತ್ಯಾದಿಗಳ ಬಗ್ಗೆ ಮನಬಿಚ್ಚಿ ಮೋದಿ ಮಾತನಾಡಿದ್ದಾರೆ. ಮೋದಿ ಮಾತುಗಳಲ್ಲೇ ಸಂದರ್ಶನದ ಆಯ್ದ ಭಾಗ ಇಲ್ಲಿದೆ…
ಅಮ್ಮನೇ ಹಣ ಕಳಿಸ್ತಾಳೆ
ಸತ್ಯವೇನೆಂದರೆ, ನನ್ನ ಅಮ್ಮನೇ ನನಗೆ ಈಗಲೂ ಹಣ ಕೊಡುತ್ತಾಳೆ. ಆಕೆಯನ್ನು ಭೇಟಿ ಯಾಗಲು ಹೋದಾಗಲೆಲ್ಲ ನೂರು-ನೂರೈವತ್ತು ರೂಪಾಯಿಯನ್ನು ನನ್ನ ಕೈಗಿಡುತ್ತಾಳೆ. ಈಗಲೂ ಅಮ್ಮ ನನ್ನಿಂದ ಏನನ್ನೂ ಆಪೇಕ್ಷಿಸುವುದಿಲ್ಲ. ಇದರ ಅರ್ಥ, ನನಗೆ ಅಮ್ಮನ ಬಗ್ಗೆ ಪ್ರೀತಿ ಇಲ್ಲ ಎಂದಲ್ಲ. ನಾನು ಇಡೀ ದೇಶವನ್ನೇ ನನ್ನ ಕುಟುಂಬವೆಂದು ಭಾವಿಸಿದವನು. ಎರಡನೆಯದಾಗಿ ನಾನು ಮುಖ್ಯ ಮಂತ್ರಿ ಯಾಗಿದ್ದಾಗಲೂ ಕೂಡ ನನ್ನ ಕುಟುಂಬ ದವರಿಗೆ ಸರಕಾರದಿಂದ ಯಾವ ರೀತಿಯ ಸಹಾಯವನ್ನೂ ಮಾಡಿಲ್ಲ. ಕೆಲವರೆಲ್ಲ ಮೆಡಿಕಲ್ ಅದೂ ಇದು ಅಂತ ಸರಕಾರದಿಂದ ಸಹಾಯ ಪಡೆಯುತ್ತಿರುತ್ತಾರೆ. ಆದರೆ ನನ್ನ ಕುಟುಂಬದವರು ಏನನ್ನೂ ಪಡೆದಿಲ್ಲ.
ವಿಪಕ್ಷಗಳಲ್ಲೂ ಒಳ್ಳೆಯ ಸ್ನೇಹಿತರಿದ್ದಾರೆ
ವಿಪಕ್ಷಗಳಲ್ಲಿ ತುಂಬಾ ಜನ ಒಳ್ಳೆಯ ಸ್ನೇಹಿತ ರಿದ್ದಾರೆ. ನಾವೆಲ್ಲರೂ ವರ್ಷದಲ್ಲಿ ಒಂದೆರಡು ಬಾರಿ ಜತೆಗೂಡಿ ಊಟ ಮಾಡುತ್ತೇವೆ. ಒಮ್ಮೆ ಏನಾಯಿ ತೆಂದರೆ, ನಾನು ಮತ್ತು ಗುಲಾಂ ನಬಿ ಆಜಾದ್ ಏನನ್ನೋ ಮಾತನಾಡುತ್ತಾ ಸಂಸತ್ತಿನ ಹೊರಗೆ ಬಂದೆವು. ನಮ್ಮಿಬ್ಬರನ್ನೂ ನೋಡಿದ ಪತ್ರಕರ್ತರು ದಂಗಾಗಿಬಿಟ್ಟರು. “ಅರೆ ನೀವು ನೋಡಿದರೆ ಆರ್ಎಸ್ಎಸ್ ಮನುಷ್ಯ ಗುಲಾಂ ನಬಿ ಆಜಾದ್ ಜತೆ ನಿಮಗೆ ದೋಸ್ತಿ ಹೇಗೆ?’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಆಗ ಆಜಾದ್ ತುಂಬಾ ಚೆನ್ನಾಗಿ ಉತ್ತ ರಿಸಿದರು. ಅವರು ಹೇಳಿ ದರು- “ನಮ್ಮಲ್ಲಿ ಎಲ್ಲ ಪಕ್ಷದವರ ನಡುವೆಯೂ ಒಂದು ಬಾಂಧವ್ಯವಿದೆ. ನಾವೆಲ್ಲ ಕುಟುಂಬ ದವರಂತೆ ಇದ್ದೇವೆ. ಹೊರಗಿ ನವರಿಗೆ ಇದೆಲ್ಲ ಕಾಣಿಸುವುದಿಲ್ಲ’ ಅಂತ.
ನಾಲ್ಕೇ ಗಂಟೆ ನಿದ್ದೆ
ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಕೂಡ ನನ್ನನ್ನು ಭೇಟಿಯಾದಾಗ ಮೊತ್ತ ಮೊದಲು ಇದೇ ಪ್ರಶ್ನೆಯನ್ನೇ ಕೇಳಿದ್ದರು. ಅದ್ಯಾಕೆ ಹೀಗೆ ಮಾಡುತ್ತೀರಿ, ಸ್ವಲ್ಪ ಜಾಸ್ತಿ ನಿದ್ದೆ ಮಾಡಿ ಎಂದು ಹೇಳಿದ್ದರು. ಅದಾದ ಬಳಿಕ ಪ್ರತಿ ಬಾರಿಯೂ ಭೇಟಿಯಾದಾಗಲೆಲ್ಲ ನನ್ನ ಮಾತು ಪಾಲಿ ಸ್ತಿದ್ದೀರಾ? ನಿದ್ದೆ ಜಾಸ್ತಿ ಮಾಡ್ತಿದ್ದೀರೋ ಇಲ್ಲವೋ?’ ಎಂದು ಅವರು ಕೇಳುತ್ತಿದ್ದರು. ನನ್ನ ಜೈವಿಕ ಚಕ್ರವೇ ಈಗ ಬದಲಾಗಿಬಿಟ್ಟಿದೆ. 3-4 ಗಂಟೆಯೊಳಗೆ ನಿದ್ದೆ ಮುಗಿದು ಬಿಡುತ್ತದೆ. ನಿವೃತ್ತಿ ಅನಂತರ ನಿದ್ದೆ ಜಾಸ್ತಿ ಮಾಡೋದು ಹೇಗೆ ಅಂತ ಮೊದಲು ಯೋಚಿಸುತ್ತೇನೆ.
ಮಮತಾ ಕಳಿಸ್ತಾರೆ ಕುರ್ತಾ
(ನಗುತ್ತಾ) ಈ ವಿಷಯ ಹೇಳಿದರೆ ಚುನಾವಣೆ ಯಲ್ಲಿ ನನಗೆ ಲುಕ್ಸಾನಾಗಬಹುದು. ಆದರೂ ಹೇಳೆ¤àನೆ ಕೇಳಿ- ಮಮತಾ ದೀದಿ (ಬ್ಯಾನರ್ಜಿ) ಇದ್ದಾ ರಲ್ಲ, ಅವರು ಈಗಲೂ ಪ್ರತಿ ವರ್ಷವೂ ತಾವೇ ಖುದ್ದಾಗಿ ಅಂಗಡಿಗೆ ಹೋಗಿ ಎರಡು ಮೂರು ಕುರ್ತಾ ಸೆಲೆಕ್ಟ್ ಮಾಡಿ ಕಳುಹಿಸುತ್ತಾರೆ. ಇನ್ನು ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ಅವರು ಕೂಡ ಪ್ರತಿ ವರ್ಷ ಢಾಕಾದಿಂದ ಹೊಸ ಹೊಸ ಬಗೆಯ ಸಿಹಿ ತಿನಿಸನ್ನು ಕಳಿಸುತ್ತಾರೆ. ಇದು ಮಮತಾ ಬ್ಯಾನರ್ಜಿ ಯವರಿಗೂ ತಿಳಿಯಿತು. ಆಗಿನಿಂದ ಅವರೂ ಕೂಡ ಪ್ರತಿ ವರ್ಷ ನನಗೆ ಬೆಂಗಾಲಿ ಸ್ವೀಟ್ಸ್ ಕಳಿಸುತ್ತಾರೆ.