ಯೋಧರ ಸಾವಿಗೆ ಪ್ರತೀಕಾರ; ಜಮ್ಮು-ಕಾಶ್ಮೀರದ ಶೋಪಿಯಾನ್ನಲ್ಲಿ ಐವರು ಉಗ್ರರ ಹತ್ಯೆ
Team Udayavani, Oct 13, 2021, 6:30 AM IST
ಶ್ರೀನಗರ: ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸೇನಾಧಿಕಾರಿ ಸಹಿತ ಐವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಭಯೋತ್ಪಾದಕರ ವಿರುದ್ಧ ಸೇನೆ ಪ್ರತೀಕಾರ ತೀರಿಸಿದೆ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಇತ್ತೀಚೆಗೆ ಬೀದಿಬದಿ ವ್ಯಾಪಾರಿ ವೀರೇಂದ್ರ ಪಾಸ್ವಾನ್ರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರ ಮುಖಾ¤ರ್ ಶಾನನ್ನು ಕೂಡ ಇದೇ ಎನ್ಕೌಂಟರ್ನಲ್ಲಿ ಸದೆಬಡಿಯಲಾಗಿದೆ. ಈ ಮೂಲಕ ನಾಗರಿಕರನ್ನು ಗುರಿಯಾಗಿಸಿ ನಡೆದಿದ್ದ ಹತ್ಯೆಯ ಎರಡು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದಂತಾಗಿದೆ. ಸೋಮವಾರ ರಾತ್ರಿ ಸೇನೆ ಶೋಪಿಯಾನ್ನ ಟುಲ್ರಾನ್ನಲ್ಲಿ ಕಾರ್ಯಾಚರಣೆ ಆರಂಭಿಸಿ ಉಗ್ರರನ್ನು ಸುತ್ತುವರಿದಿತ್ತು.
ಅನಂತರ ಶರಣಾಗತಿಗೆ ಅವಕಾಶವನ್ನೂ ಕಲ್ಪಿಸಿತು. ಆದರೆ ಉಗ್ರರು ಗುಂಡಿನ ಮಳೆಗರೆಯಲು ಆರಂಭಿಸಿದ ಕಾರಣ ದಿ ರೆಸಿಸ್ಟೆಂಟ್ ಫ್ರಂಟ್ (ಟಿಆರ್ಎಫ್)ನ ಮೂವರು ಉಗ್ರರನ್ನು ಹತ್ಯೆಗೈಯಲಾಯಿತು.
ಫೀರಿಪೋರಾದಲ್ಲಿ ಇಬ್ಬರ ಹತ್ಯೆ
ಶೋಪಿಯಾನ್ ಜಿಲ್ಲೆಯ ಫೀರಿಪೋರಾದಲ್ಲಿ ಮಂಗಳ ವಾರ ಇಬ್ಬರು ಉಗ್ರರನ್ನು ಹತ್ಯೆಗೈಯಲಾಯಿತು.
ಲಷ್ಕರ್ ಉಗ್ರ ಸೆರೆ
ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕ್ನ ಡ್ರೋನ್ ಇತ್ತೀಚೆಗೆ ಶಸ್ತ್ರಾಸ್ತ್ರ ಎಸೆದ ಪ್ರಕರಣ ಸಂಬಂಧ ಲಷ್ಕರ್ ಉಗ್ರ, ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಇರ್ಫಾನ್ ಅಹ್ಮದ್ ಭಟ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಉಬೆರ್ ಕಪ್ ಬ್ಯಾಡ್ಮಿಂಟನ್: ಭಾರತ ಕ್ವಾರ್ಟರ್ ಫೈನಲ್ಗೆ
ಪಾಕ್ನ ಸಂಚು ವಿಫಲ
ಹಬ್ಬಗಳ ಸಮಯದಲ್ಲಿ ದೇಶದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕಿಸ್ಥಾನಿ ಉಗ್ರನೊಬ್ಬನನ್ನು ದಿಲ್ಲಿಯಲ್ಲಿ ಮಂಗಳವಾರ ಬಂಧಿಸಲಾಗಿದೆ. ಈ ಮೂಲಕ ದೊಡ್ಡ ಮಟ್ಟದ ವಿಧ್ವಂಸಕ ಸಂಚನ್ನು ವಿಫಲಗೊಳಿಸಲಾಗಿದೆ. ಬಂಧಿತ ಉಗ್ರ ಭಾರತೀಯ ಪ್ರಜೆ ಎಂಬ ನಕಲಿ ಗುರುತಿನ ದಾಖಲೆ ಹೊಂದಿದ್ದು, 10-15 ವರ್ಷಗಳಿಂದ ದಿಲ್ಲಿಯಲ್ಲಿ ವಾಸವಿದ್ದ. ಆತನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನಾ ತಿಳಿಸಿದ್ದಾರೆ.