ನಕಲಿ ಸುದ್ದಿಗಳೇ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತವರಿಗೆ ಮರಳಲು ಕಾರಣ: ಗೃಹ ಸಚಿವಾಲಯ
Team Udayavani, Sep 16, 2020, 8:50 AM IST
ನವದೆಹಲಿ: ಕೋವಿಡ್ ಸಾಂಕ್ರಮಿಕ ರೋಗದ ವಿರುದ್ಧ ಹೋರಾಡಲು ಮಾರ್ಚ್ ನಲ್ಲಿ ದೇಶದಲ್ಲಿ ಲಾಕ್ ಡೌನ್ ವಿಧಿಸಲಾಗಿತ್ತು. ಆದರೇ ಕೆಲವು ನಕಲಿ ಸುದ್ದಿಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ನಗರಗಳಿಂದ ತವರು ರಾಜ್ಯಗಳಿಗೆ ವಲಸೆ ಹೋಗಿದ್ದರು ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಮಂಗಳವಾರ ಲೋಕಸಭೆಗೆ ತಿಳಿಸಿದೆ.
ಮಾರ್ಚ್ 25 ರಂದು ಜಾರಿಗೆ ಬಂದ ಲಾಕ್ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರು ಆಹಾರ, ಕುಡಿಯುವ ನೀರು, ಆರೋಗ್ಯ ಸೇವೆಗಳ ಪ್ರವೇಶ ಮತ್ತು ಆಶ್ರಯದಂತಹ ಮೂಲಭೂತ ಅವಶ್ಯಕತೆಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತ್ಯಾನಂದ್ ರಾಯ್, ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಕಾಳಜಿಯನ್ನು ಹೊಂದಿದೆ. ಲಾಕ್ ಡೌನ್ ಸಮಯದಲ್ಲಿ ಯಾವುದೇ ನಾಗರಿಕನು ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯಗಳಿಂದ ವಂಚಿತನಾಗಿಲ್ಲ ಎಂದರು.
ರೋಗ ಹರಡುವುದನ್ನು ತಡೆಯಲು ಕಾರ್ಖಾನೆಗಳು ಸೇರಿದತೆ ವ್ಯಾಪಾರ ಸಂಸ್ಥೆಗಳು ಮುಚ್ಚಿದ ಕಾರಣ, ವಲಸೆ ಕಾರ್ಮಿಕರಿಗೆ ಆತಂಕ ಎದುರಾಗಿತ್ತು. ಮಾತ್ರವಲ್ಲದೆ ಲಾಕ್ಡೌನ್ ಎಷ್ಟು ಕಾಲ ಇರುತ್ತದೆ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುವ ಸಂಭವ ಇದೆ ಎಂಬ ಮಾಧ್ಯಮಗಳು ಸೇರಿದಂತೆ ಇತರೆಡೆ ಊಹಾಪೋಹಗಳು ಹಬ್ಬಿದ್ದರಿಂದ ಕಾರ್ಮಿಕರು ತಮ್ಮ ತವರು ರಾಜ್ಯಗಳಾದ ವಲಸೆ ಹೋಗಿದ್ದಾರೆ ಎಂದರು.
ಲಾಕ್ ಡೌನ್ ಸಮಯದಲ್ಲಿ ಅಂದಾಜು 10.4 ಮಿಲಿಯನ್ ವಲಸಿಗರು ಮನೆಗೆ ಮರಳಿದ್ದಾರೆ ಎಂದು ಸರ್ಕಾರ ಸೋಮವಾರ ಸಂಸತ್ತಿಗೆ ತಿಳಿಸಿದೆ, ಆದರೇ ಎಷ್ಟು ವಲಸೆ ಕಾರ್ಮಿಕರಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆಂಬುದಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತಗ್ಗಿಸಲು, ಕೇಂದ್ರವು ಜಂಟಿ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಮತ್ತು ಪ್ರಮುಖ ಕೇಂದ್ರ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಗೃಹ ಸಚಿವಾಲಯದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ ಎಂದು ಎಂಎಚ್ಎ ಮಂಗಳವಾರ ತಿಳಿಸಿದೆ.