ಬಾಳಾ ಠಾಕ್ರೆ ಕಟ್ಟಿದ ಪಕ್ಷಕ್ಕೆ ಈ ಸ್ಥಿತಿ ಬರಬಾರದಿತ್ತು! ಉದ್ಧವ್ ವಿರುದ್ಧ ವಿಎಚ್ ಪಿ ಕಿಡಿ
ಉದ್ಧವ್ ಹೇಳಿಕೆಯನ್ನು ಗಮನಿಸಿದರೆ ಇದೊಂದು ಕುರುಡು ಆರೋಪದಂತೆ ಕಾಣಿಸುತ್ತದೆ.
Team Udayavani, Jul 27, 2020, 6:22 PM IST
ನವದೆಹಲಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭೂಮಿ ಪೂಜೆ ನೆರವೇರಿಸಬಹುದು ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಯನ್ನು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಖಂಡಿಸಿದ್ದಾರೆ.
ಉದ್ಧವ್ ಹೇಳಿಕೆಯನ್ನು ಗಮನಿಸಿದರೆ ಇದೊಂದು ಕುರುಡು ಆರೋಪದಂತೆ ಕಾಣಿಸುತ್ತದೆ. ಒಂದು ಕಾಲದಲ್ಲಿ ದಂತಕತೆ ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಹಿಂದು ಪಕ್ಷದ ಅವನತಿಯಂತೆ ಕಾಣಿಸುತ್ತಿದೆ ಎಂದು ಕುಮಾರ್ ಟೀಕಿಸಿದ್ದಾರೆ.
ವಿಎಚ್ ಪಿ ಕಾರ್ಯಾಧ್ಯಕ್ಷ ಕುಮಾರ್ ಅವರ ಅಧಿಕೃತ ಪ್ರಕಟಣೆಯಲ್ಲಿ, ಭೂಮಿ ಪೂಜೆಗೆ ಸಂಬಂಧಿಸಿದಂತೆ ಠಾಕ್ರೆ ನೀಡಿರುವ ಸಲಹೆ ಬಗ್ಗೆ ನಮಗೂ ಕಳಕಳಿ ಇದೆ. ಆದರೆ ಉದ್ಧವ್ ಠಾಕ್ರೆ ಹೇಳಿಕೆ ಕುರುಡು ವಿರೋಧವಾಗಿದೆ. ಅಲ್ಲದೇ ಒಂದು ಕಾಲದ ಕಟ್ಟಾ ಹಿಂದೂತ್ವವಾದಿ ಪಕ್ಷ ಈ ಸ್ಥಿತಿಗೆ ಬಂತು ಎಂಬ ಬಗ್ಗೆ ದುಃಖಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ಭೂಮಿ ಪೂಜೆಯನ್ನು ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವಂತೆ ಉದ್ಧವ್ ಠಾಕ್ರೆ ಜುಲೈ 26ರಂದು ಸಲಹೆ ನೀಡಿದ್ದರು.