ಈ ವರ್ಷವೇ ಉಗ್ರರ ನಿರ್ನಾಮ ಹೆಚ್ಚು
Team Udayavani, Dec 25, 2018, 6:00 AM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಕಾಲಿಟ್ಟು 30 ವರ್ಷಗಳು ಕಳೆದಿವೆ. ಈ ವರ್ಷಗಳಿಗೆ ಹೋಲಿಕೆ ಮಾಡಿದರೆ ಉಗ್ರಗಾಮಿಗಳನ್ನು ಮಟ್ಟ ಹಾಕುವ ಕೆಲಸ ನಡೆದಿದ್ದು ಪ್ರಸಕ್ತ ವರ್ಷವೇ ಹೆಚ್ಚು.
ಕಳೆದ ವರ್ಷಕ್ಕೆ ಹೋಲಿಸಿದರೆ 2018ರಲ್ಲಿ ಶೇ. 70ರಷ್ಟು ಹೆಚ್ಚು ಉಗ್ರರ ದಮನವಾಗಿದೆ. ಇದರ ಜತೆಗೆ ಮಾಹಿತಿ ನೀಡುವವರನ್ನು ಉಗ್ರರು ಕೊಲ್ಲುತ್ತಿದ್ದರೂ ಉಗ್ರವಾದಿಗಳ ವಿರುದ್ಧ ಸೇನೆಗೆ ಮಾಹಿತಿ ನೀಡುವವರ ಸಂಖ್ಯೆಯೂ ಹೆಚ್ಚಿದೆ. ಈ ವರ್ಷ ಡಿ. 23ರ ವರೆಗೆ 270 ಮಂದಿ ಉಗ್ರರನ್ನು ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ.
ಅಸುನೀಗಿದ ಉಗ್ರರೆಲ್ಲ ಕಾಶ್ಮೀರದವರೇ. ಉಗ್ರರು ಭಾರತದ ವಿರುದ್ಧ ಹೋರಾಡ ಬೇಕೆಂದು ಕೆಟ್ಟ ರೀತಿಯಲ್ಲಿ ಯುವ ಸಮುದಾಯದ ಮನಃ ಪರಿವರ್ತನೆ ಮಾಡಿ ತರಾತುರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿ ಕಳುಹಿಸುತ್ತಾರೆ. ಅವಸರದಲ್ಲಿ ಭಯೋತ್ಪಾದನ ಶಿಬಿರಗಳಿಂದ ತರಬೇತಿ ಪಡೆದುಕೊಂಡು ಬರುವವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಂಥವರ ನಿರ್ನಾಮ ಕೂಡ ಸುಲಭವಾಗಿಯೇ ನಡೆಯುತ್ತಿದೆ. ಶೋಪಿಯಾನ್ನ ಒಂದು ಘಟನೆಯನ್ನು ಪರಿಗಣಿಸುವುದಾದರೆ ಉಗ್ರ ನಿಗ್ರಹ ತಂಡದ ಹಿರಿಯ ಅಧಿಕಾರಿ ಅಪಾಯವನ್ನೂ ಲೆಕ್ಕಿಸದೆ ಮನೆಯ ಬಾಗಿಲನ್ನೇರಿ ಎಕೆ 47 ರೈಫಲ್ ಅನ್ನು ಕಿಟಕಿಯೊಳಕ್ಕೆ ತೂರಿಸಿ ಒಳಗಿದ್ದ ಅಷ್ಟೂ ಉಗ್ರರನ್ನು ಕೊಂದಿದ್ದರು.
ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಹಂಸರಾಜ ಅಹಿರ್ ಸಂಸತ್ಗೆ ನೀಡಿದ ಮಾಹಿತಿ ಪ್ರಕಾರ, ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ವಿರುದ್ಧ 759 ಕಲ್ಲು ಎಸೆಯುವ ಘಟನೆಗಳು ನಡೆದಿವೆ. ಎನ್ಕೌಂಟರ್ ನಡೆದ ಸ್ಥಳದಲ್ಲಿ ನಡೆದ ಇಂಥ ಘಟನೆಗಳಿಂದ 59 ಮಂದಿ ನಾಗರಿಕರು ಅಸುನೀಗಿದ್ದಾರೆ.
ಸಂಖ್ಯೆ ಹೆಚ್ಚಾಗಿದೆ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಬಂದ ಬಳಿಕ ಉಗ್ರ ನಿರ್ನಾಮ ಹೆಚ್ಚಾಗಿದ್ದರೂ, ಅಷ್ಟೇ ಪ್ರಮಾಣದಲ್ಲಿ ಬಂದೂಕಿನತ್ತ ಮಾರು ಹೋಗು ವವರ ಸಂಖ್ಯೆ ವೃದ್ಧಿಸಿದೆ. 176 ಮಂದಿ ಕಾಶ್ಮೀರಿ ಯುವಕರು ಹಿಂಸೆಯ ದಾರಿ ಹಿಡಿದಿದ್ದಾರೆ ಎನ್ನುವುದು ಸರ್ಕಾರ ನೀಡುವ ಮಾಹಿತಿ.
ಖಚಿತ ಮಾಹಿತಿ ಅಗತ್ಯ: ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಖಚಿತ ಮಾಹಿತಿ ಅಗತ್ಯ. ಸ್ಥಳೀಯರು ನೀಡಿದ ಮಾಹಿತಿ ಸರಿಯಾಗಿದ್ದರೆ ಕಾರ್ಯಾಚರಣೆಗೆ ಯಶಸ್ಸು ಸಿಗುತ್ತದೆ.