ಕೃಷಿ ತ್ಯಾಜ್ಯ ಸುಟ್ಟ ಗುರುಗ್ರಾಮದ ರೈತರಿಗೆ ಎಕರೆಗೆ 2,500 ರೂ ದಂಡ ವಿಧಿಸಿದ ಜಿಲ್ಲಾಡಳಿತ !
ರೈತರು ಭತ್ತ ಕಟಾವು ಮಾಡಿದ ನಂತರ ಒಣ ಹುಲ್ಲು ಮತ್ತು ಕಡ್ಡಿಗಳನ್ನು ಸುಡದಂತೆ ಮನವಿ ಮಾಡಿದ್ದೇವೆ
Team Udayavani, Oct 12, 2022, 5:39 PM IST
ಗುರುಗ್ರಾಮ:ಪಂಜಾಬ್ ನ ಗುರುಗ್ರಾಮದಲ್ಲಿ ನಡೆಯುತ್ತಿರುವ ಒಣ ಹುಲ್ಲು ಸುಡುವುದನ್ನು ತಡೆಯುವ ಸಲುವಾಗಿ ಜಿಲ್ಲೆಯಲ್ಲಿ ಒಣ ಹುಲ್ಲು ಸುಡುವ ರೈತರಿಗೆ ದಂಡ ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಒಣ ಹುಲ್ಲು ಮತ್ತು ಕೃಷಿ ತ್ಯಾಜ್ಯ ಸುಡುವ ರೈತರಿಗೆ ಎಕರೆಗೆ 2,500 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಮಾತನಾಡಿ, ಒಣ ಹುಲ್ಲು ಸುಡುವ ಹಾವಳಿ ತಡೆಯಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟ, ಉಪವಿಭಾಗ ಮಟ್ಟ, ಬ್ಲಾಕ್ ಮಟ್ಟ ಮತ್ತು ಗ್ರಾಮ ಮಟ್ಟದಲ್ಲಿ ಸಂಬಂಧಿತ ಪ್ರದೇಶಗಳಲ್ಲಿ ಒಣ ಹುಲ್ಲು ಸುಡುವುದನ್ನು ಮೇಲ್ವಿಚಾರಣೆ ಮಾಡಲು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ಪರಿಸರ ನಿಯಂತ್ರಣ ಇಲಾಖೆಗೂ ಅಗತ್ಯ ಸೂಚನೆ ನೀಡಲಾಗಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ರೈತರು ಭತ್ತ ಕಟಾವು ಮಾಡಿದ ನಂತರ ಒಣ ಹುಲ್ಲು ಮತ್ತು ಕಡ್ಡಿಗಳನ್ನು ಸುಡದಂತೆ ಮನವಿ ಮಾಡಿದ್ದೇವೆ.ಇದರಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ ಪ್ರಾಣಿ, ಪಕ್ಷಿ, ಸಸ್ಯಗಳಿಗೂ ಹಾನಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಕೃಷಿ ತ್ಯಾಜ್ಯಗಳ ನಿರ್ವಹಣೆಗಳಿಗಾಗಿ ಬಾಡಿಗೆ ಕೇಂದ್ರಗಳಿಂದ ಕೃಷಿ ಉಪಕರಣಗಳನ್ನು ತೆಗೆದುಕೊಳ್ಳುವಲ್ಲಿ ಶೇಕಡಾ 50 ರಷ್ಟು ರಿಯಾಯಿತಿಯನ್ನು ಯಾವುದೇ ನೋಂದಾಯಿತ ರೈತರಿಗೆ ನೀಡಲಾಗುವುದು. ಈ ಸೌಲಭ್ಯಗಳನ್ನು ಪಂಚಾಯತ್ ವ್ಯಾಪ್ತಿಯ ರೈತರಿಗೆ ಶೇಕಡಾ 80 ರಷ್ಟು ಅನುದಾನ ಲಭ್ಯವಾಗುವಂತೆ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.