ಜಿಎಸ್ಟಿ ರಿಯಾಯಿತಿ ಗ್ರಾಹಕರಿಗೆ ನೀಡದಿದ್ದರೆ ದಂಡ
Team Udayavani, Jun 22, 2019, 5:00 AM IST
ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಬಾರಿಗೆ ಶುಕ್ರವಾರ ಜಿಎಸ್ಟಿ ಸಮಿತಿಯ ಸಭೆ ನಡೆಸಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ತೆರಿಗೆ ವಂಚನೆ ತಡೆ ಪ್ರಾಧಿಕಾರದ ಅವಧಿಯನ್ನು ಇನ್ನೂ 2 ವರ್ಷಗಳಿಗೆ ವಿಸ್ತರಿಸಲಾಗಿದೆ. ಜಿಎಸ್ಟಿ ಜಾರಿ ಸಮಯದಲ್ಲೇ ಉದ್ಯಮಿಗಳು ತೆರಿಗೆ ವಂಚನೆ ನಡೆಸುವ ಸಾಧ್ಯತೆಯನ್ನು ಶೋಧಿಸಲು ಮತ್ತು ತೆರಿಗೆ ವಂಚನೆ ತಡೆಯಲು ಈ ಸಮಿತಿ ರಚಿಸಲಾಗಿತ್ತು. ಸಮಿತಿಯು 2021ರ ವರೆಗೆ ಕಾರ್ಯನಿರ್ವಹಿಸಲಿದೆ.
ಅಲ್ಲದೆ, ಜಿಎಸ್ಟಿ ಇಳಿಕೆಯಿಂದ ಉಂಟಾದ ಲಾಭವನ್ನು ಗ್ರಾಹಕರಿಗೆ ಉದ್ಯಮಗಳು ವರ್ಗಾವಣೆ ಮಾಡದಿದ್ದರೆ, ದಂಡ ವಿಧಿಸುವ ನಿರ್ಧಾರ ಮಾಡಲಾಗಿದೆ. ಮಂಡಳಿಯ 35ನೇ ಸಭೆ ಇದಾಗಿದ್ದು, ಜಿಎಸ್ಟಿ ನೋಂದಣಿ ಮಾಡಲು ವಹಿವಾಟುಗಳು ಆಧಾರ್ ಬಳಕೆ ಮಾಡಲು ಅನುವು ಮಾಡಲಾಗಿದೆ. ಇದರಿಂದಾಗಿ ಜಿಎಸ್ಟಿಗೆ ಸಣ್ಣ ಉದ್ಯಮಗಳು ನೋಂದಣಿ ಮಾಡಿಕೊಳ್ಳುವುದು ಸುಲಭವಾಗಲಿದೆ.
ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಅವಧಿಯನ್ನು 2 ತಿಂಗಳವರೆಗೆ ವಿಸ್ತರಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ರಿಟರ್ನ್ಸ್ ಸಲ್ಲಿಸಲು ಆ. 30ರ ವರೆಗೆ ಅವಕಾಶ ಸಿಕ್ಕಿದೆ. ಅಲ್ಲದೆ, ಜಿಎಸ್ಟಿ ಸಲ್ಲಿಕೆಗೆ ಒಂದೇ ನಮೂನೆಯ ವ್ಯವಸ್ಥೆಯು 2020 ಜ.1ರಿಂದ ಜಾರಿಗೆ ಬರಲಿದೆ.
ತೆರಿಗೆ ಇಳಿಕೆ: ಎಲೆಕ್ಟ್ರಿಕ್ ವಾಹನಗಳಿಗೆ ಶೇ.12ರಿಂದ ಶೇ.5ಕ್ಕೆ ಜಿಎಸ್ಟಿ ಇಳಿಕೆಯ ಪ್ರಸ್ತಾವನೆಯನ್ನು ಫಿಟ್ಮೆಂಟ್ ಸಮಿತಿಗೆ ವರ್ಗಾಯಿಸಲಾಗಿದೆ. ಎಲೆಕ್ಟ್ರಿಕ್ ಚಾರ್ಜರ್ಗೆ ಈಗಿನ ಶೇ.18ರಿಂದ ಶೇ.12ಕ್ಕೆ ತೆರಿಗೆ ಇಳಿಸಲಾಗುತ್ತದೆ. ಇದರ ಜಾರಿ ಕುರಿತ ವಿವರಗಳನ್ನು ಫಿಟ್ಮೆಂಟ್ ಸಮಿತಿ ಅಂತಿಮಗೊಳಿಸಿದ ಅನಂತರ ಇದು ಜಾರಿಗೆ ಬರಲಿದೆ.