ದಿಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ; ನೂರು ನಿವಾಸಿಗಳ ರಕ್ಷಣೆ, ಸಾವು, ನೋವು ಇಲ್ಲ
Team Udayavani, Jun 20, 2019, 11:38 AM IST
ಹೊಸದಿಲ್ಲಿ : ವಾಯವ್ಯ ದಿಲ್ಲಿಯ ಪೀತಾಂಪುರದಲ್ಲಿನ 10 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ನೂರು ನಿವಾಸಿಗಳನ್ನು ಸುರಕ್ಷಿತವಾಗಿ ಪಾರು ಮಾಡಲಾಗಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಬುಧವಾರ ತಡರಾತ್ರಿ ಸಂಭವಿಸಿದ್ದ ಈ ಅಗ್ನಿ ಅವಘಡದಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಆದರೂ ಕೆಲವರಿಗೆ ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿದ ಸ್ಥಿತಿ ಉಂಟಾಗಿ ಅವರನ್ನು ಸಕಾಲದಲ್ಲಿ ರಕ್ಷಿಸಲಾಯಿತು ಎಂದು ಅಗ್ನಿ ಶಾಮಕ ದಳ ಅಧಿಕಾರಿ ಅತುಲ್ ಗರ್ಗ್ ತಿಳಿಸಿದ್ದಾರೆ.
ನಸುಕಿನ 1 ಗಂಟೆಯ ಸುಮಾರಿಗೆ ಕಟ್ಟಡದ ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅನಂತರ ಅದು ಇತರ ಮಹಡಿಗಳಿಗೂ ಹಬ್ಬಿತು.
ಸುದ್ದಿ ತಿಳಿದು ಧಾವಿಸಿ ಬಂದ ಹದಿನೈದು ಅಗ್ನಿ ಶಾಮಕಗಳು ಮೂರು ತಾಸುಗಳ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸಲು ಸಫಲವಾದವು.