ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅಸುನೀಗಿದರೆ 2 ಲಕ್ಷ ಪರಿಹಾರ
Team Udayavani, Aug 4, 2021, 7:50 AM IST
ಹೊಸದಿಲ್ಲಿ: ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಅಸುನೀಗಿದ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ. ನೀಡಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ರಾಜ್ಯಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದ್ದು, ಸದ್ಯದ ನಿಯಮಗಳ ಪ್ರಕಾರ ಅಸುನೀಗಿದವರಿಗೆ 25 ಸಾವಿರ ರೂ., ಗಾಯಗೊಂಡವರಿಗೆ 12,500 ರೂ.ನೀಡಲಾಗುತ್ತಿದೆ ಎಂದರು.
2019ರ ಮಾಹಿತಿ ಪ್ರಕಾರ, ದೇಶದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ 29,354 ಮಂದಿ ಸಾವಿಗೀಡಾಗಿ ದ್ದರೆ, 67,751 ಮಂದಿ ಗಾಯಗೊಂಡಿ ದ್ದಾರೆ. ಅಪಘಾತ ಎಸಗಿ ಪರಾರಿಯಾಗಿ ರುವ ವ್ಯಕ್ತಿಯನ್ನು ಹಿಡಿಯಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ವತಿಯಿಂದಲೇ ಮೋಟಾರು ವಾಹನ ಅಪಘಾತ ನಿಧಿ ಸ್ಥಾಪಿಸಿ, ಅದರ ಮೂಲಕ ಪರಿಹಾರ ನೀಡಲಾಗುತ್ತದೆ.
ಫ್ಲೆಕ್ಸಿ ಇಂಧನ ವಾಹನಗಳಿರಲಿ: ಮುಂದಿನ 1 ವರ್ಷದ ಒಳಗಾಗಿ ವಾಹನ ಉತ್ಪಾದಕರು ಎರಡು ರೀತಿಯ ಇಂಧನಗಳಿಂದ (ಫ್ಲೆಕ್ಸಿ ಫ್ಯೂಯೆಲ್) ಚಲಿಸುವ ವಾಹನಗಳನ್ನು ಉತ್ಪಾದಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದೂ ಸಚಿವ ಗಡ್ಕರಿ ಒತ್ತಾಯಿಸಿದ್ದಾರೆ. ಜತೆಗೆ ಎಲ್ಲ ವಾಹನಗಳಲ್ಲಿಯೂ ಕನಿಷ್ಠ 6 ಏರ್ಬ್ಯಾಗ್ ಇರುವಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.