ವಿದೇಶ ಪ್ರವಾಸ,1 ಕೋ.ರೂ.,ಬುಲೆಟ್ ಬೈಕು!
Team Udayavani, Apr 1, 2019, 6:00 AM IST
ಸಾಂದರ್ಭಿಕ ಚಿತ್ರ.
ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರ ಹೆಚ್ಚು ಮತಗಳು ಹರಿದುಬರುವಂತೆ ಮಾಡುವ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಬರೋಬ್ಬರಿ 1 ಕೋಟಿ ರೂ.ಗಳಷ್ಟು ನಗದು ಬಹುಮಾನ, ವಿದೇಶ ಪ್ರವಾಸ, ಬೈಕುಗಳ ಕೊಡುಗೆಯಂಥ ಆಮಿಷಗಳನ್ನು ಒಡ್ಡಿರುವ ಆರೋಪಕ್ಕೆ ತಮಿಳುನಾಡಿನ ಮೂವರು ಅಭ್ಯರ್ಥಿಗಳು ಒಳಗಾಗಿದ್ದಾರೆ.
ಈ ಆರೋಪ ಎದುರಿಸುತ್ತಿರುವವರು ವೆಲ್ಲೂರಿನ ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಮತ್ತು ಅದೇ ಕ್ಷೇತ್ರದ ಎಐಡಿಎಂಕೆ ಅಭ್ಯರ್ಥಿ ಎ.ಸಿ. ಷಣ್ಮುಗಂ ಮತ್ತು ಅರಕ್ಕೋಣಂನ ಡಿಎಂಕೆ ಅಭ್ಯರ್ಥಿ ಎಸ್. ಜಗದ್ರಕ್ಷಕನ್.
ಕಾತಿರ್ ಆನಂದ್ ಅವರು ಡಿಎಂಕೆ ಖಜಾಂಚಿ ದುರೈಮುರುಗನ್ ಪುತ್ರ. ತನ್ನ ಲೋಕಸಭಾ ಕ್ಷೇತ್ರದ ಪ್ರತಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿರುವ ಪಕ್ಷದ ನಾಯಕರಿಗೆ ತಲಾ 50 ಲಕ್ಷ ರೂ. ಆಮಿಷ ನೀಡಿದ್ದಾರೆಂದು ಹೇಳಲಾಗಿದೆ.
ನ್ಯೂ ಜಸ್ಟಿಸ್ ಪಾರ್ಟಿಯ ಸಂಸ್ಥಾಪಕ ಮತ್ತು ಈ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯಾಗಿರುವ ಷಣ್ಮುಗಂ, ತಮ್ಮ ಕಾರ್ಯಕರ್ತರಿಗೆ ಬುಲೆಟ್ ಬೈಕ್ ಹಾಗೂ ವಿದೇಶಿ, ಸ್ವದೇಶಿ ಪ್ರವಾಸಗಳ ವೆಚ್ಚ ಭರಿಸುವ ಆಮಿಷ ನೀಡಿದ್ದಾರೆಂಬ ಆರೋಪ ಹೊತ್ತಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಗಳ ಉಸ್ತುವಾರಿ ಹೊತ್ತಿರುವ ಪಕ್ಷದ ನಾಯಕರಿಗೆ ಅಥವಾ ಕಾರ್ಯಕರ್ತರಿಗೆ ಇಂಥ ಆಮಿಷಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.