ಪ್ರಕೃತಿ ವಿಕೋಪ: ನಮ್ಮಲ್ಲೇ ಹಾನಿ ಹೆಚ್ಚು ; ಹವಾಮಾನ ವೈಪರೀತ್ಯ ವರದಿಯಲ್ಲಿ ವಿವರ ಬಹಿರಂಗ
Team Udayavani, Dec 6, 2019, 12:29 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನಾಗ್ಪುರ: ಪ್ರಾಕೃತಿಕ ವಿಪತ್ತು ಸಂಭವಿಸಿದ್ದರಿಂದ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಹಾನಿಗೆ ಒಳಗಾಗಿದ್ದು ಭಾರತ. 2018ನೇ ಸಾಲಿಗೆ ಸಂಬಂಧಿಸಿದ ಮಾಹಿತಿ ಇದಾಗಿದೆ. ಇದರ ಜತೆಗೆ ಆರ್ಥಿಕವಾಗಿ ನೋಡುವುದಿದ್ದರೆ ಹವಾಮಾನ ಸಂಬಂಧಿ ದುರಂತಗಳಿಂದ ಉಂಟಾಗಿರುವ ಆರ್ಥಿಕ ನಷ್ಟ 2 ಲಕ್ಷ ಕೋಟಿ ರೂ. ಕಳೆದ ವರ್ಷ ಹಲವು ರೀತಿಯ ವಿಪತ್ತುಗಳಿಂದಾಗಿ ದೇಶದಲ್ಲಿ 2,081 ಮಂದಿ ಅಸುನೀಗಿದ್ದಾರೆ. ‘ದ ಗ್ಲೋಬಲ್ ಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2020’ ಎಂಬ ವರದಿಯಲ್ಲಿ ಈ ಅಂಶವನ್ನು ಪ್ರಸ್ತಾಪ ಮಾಡಲಾಗಿದೆ. ಅದರಿಂದ ಉಂಟಾಗಿರುವ ನಷ್ಟ 37 ಸಾವಿರ ಮಿಲಿಯನ್ ಡಾಲರ್ ಅಂದರೆ ಬಜೆಟ್ನಲ್ಲಿ ದೇಶದ ಆರೋಗ್ಯ ಕ್ಷೇತ್ರಕ್ಕೆ ನೀಡುವ ಮೊತ್ತದ ನಾಲ್ಕು ಪಾಲಿಗೆ ಸಮನಾಗಿದೆ.
ಕಳೆದ ವರ್ಷ ಉಂಟಾದ ಬಿಸಿ ಗಾಳಿಯ ಹೊಡೆತ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೀರ್ಘ ಅವಧಿಯದ್ದಾಗಿತ್ತು. ನೀರಿನ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದೇ ಇರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೇರೆ ಪ್ರದೇಶಕ್ಕೆ ಗುಳೆ ಹೋಗಿದ್ದರು. ಇದರ ಜತೆಗೆ ಸಾವು ನೋವುಗಳೂ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
2004ರಿಂದ ಈಚೆಗೆ ಭಾರತದ 15 ವರ್ಷಗಳಿಂದ 11 ವರ್ಷಗಳಲ್ಲಿ ಅತ್ಯಂತ ದೀರ್ಘಾವಧಿಯ ತಾಪಮಾನದ ವರ್ಷಗಳು ಎಂದು ದಾಖಲಾಗಿವೆ. 1992ರ ಬಳಿಕ ಭಾರತದಲ್ಲಿ 25 ಸಾವಿರ ಮಂದಿ ಬಿಸಿಲಿನ ಝಳ, ಬಿಸಿ ಗಾಳಿಯಿಂದಲೇ ಜೀವ ಕಳೆದುಕೊಂಡಿದ್ದಾರೆ ಎಂದು ಅದು ಹೇಳಿದೆ. ಭಾರತದ ಜತೆಗೆ ಜರ್ಮನಿ, ಜಪಾನ್ ಕೂಡ ಪ್ರಾಕೃತಿಕ ವಿಪತ್ತುಗಳಿಂದ ಸಾಕಷ್ಟು ನಷ್ಟ ಅನುಭವಿಸಿದೆ.