ಸ್ಮಶಾನದಲ್ಲಿ ಸಿಕ್ಕಿತು ಚಿನ್ನ, ವಜ್ರ
Team Udayavani, Feb 8, 2019, 11:37 PM IST
ಚೆನ್ನೈ: ಸ್ಮಶಾನದಲ್ಲಿ ಚಿನ್ನ, ವಜ್ರ, ನಗದು ಸಿಗುತ್ತದೆ. ಏನಾಪ್ಪಾ ಇದು, ಯಾವ ಕಾಲ ಎಂದು ತಿಳಿದುಕೊಳ್ಳಬೇಡಿ. ಆದಾಯ ತೆರಿಗೆ ಇಲಾಖೆ ಕೊಯಮತ್ತೂರು ಮತ್ತು ಚೆನ್ನೈನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಹಲವು ಸಮೂಹ ವಹಿವಾಟುಗಳನ್ನು ಹೊಂದಿದ ಮೂರು ಇತರ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಸ್ಮಶಾನದಲ್ಲಿಯೂ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೂರು ಕಂಪನಿಗಳಿಗೆ ಸೇರಿದ ಒಟ್ಟು 433 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ, ವಜ್ರದ ಆಭರಣಗಳು ಸಿಕ್ಕಿವೆ. ಈ ಪೈಕಿ 25 ಕೋಟಿ ರೂ. ನಗದು, 12 ಕೆಜಿ ಚಿನ್ನ, 626 ಕ್ಯಾರೆಟ್ ವಜ್ರಗಳು ಸೇರಿವೆ.
ಗರಿಷ್ಠ ಮಟ್ಟದ ರಹಸ್ಯ ಕಾಯ್ದುಕೊಂಡರೂ ದಾಳಿ ವಿಚಾರ ಸೋರಿಕೆಯಾಗಿದೆ ಎಂದು ಹೇಳಲಾಗಿದೆ. ಇದರ ಜತೆಗೆ ವಿವಿಧ ಕಂಪ್ಯೂಟರ್ಗಳಲ್ಲಿರುವ ದಾಖಲೆಗಳನ್ನೂ ಅಳಿಸಿ ಹಾಕಲಾಗಿದೆ. ಕಂಪನಿಯೊಂದರ ಆಡಳಿತ ಮಂಡಳಿ ವಾಹನವೊಂದರಲ್ಲಿ ಬೆಲೆ ಬಾಳುವ ವಸ್ತುಗಳು, ದಾಖಲೆಗಳನ್ನು ಬೇರೊಂದು ಸ್ಥಳಕ್ಕೆ ಸಾಗಿಸಿದ್ದು ಖಚಿತವಾಗಿದೆ. ಅದನ್ನು ಹಿಂಬಾಲಿಸಿ ವಶಪಡಿಸಿಕೊಂಡರೂ, ಹೆಚ್ಚಿನ ಪ್ರಮಾಣದ ವಸ್ತುಗಳು ಸಿಕ್ಕಿಲ್ಲವೆಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 9 ದಿನಗಳ ಕಾಲ ಈ ಕಾರ್ಯಾಚರಣೆ ನಡೆದಿದೆ.