ಕರಾವಳಿ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ
Team Udayavani, Jun 4, 2018, 6:47 AM IST
ಹೊಸದಿಲ್ಲಿ: ದೇಶೀಯ ಜಲಸಾಗಣೆ ನೀತಿಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಮತ್ತು ಪ್ರಾಣಿ ಉತ್ಪನ್ನಗಳ ಸರಕುಗಳನ್ನು ಸಾಗಿಸಲು ವಿದೇಶಿ ಹಡಗುಗಳಿಗೆ ಅಗತ್ಯ ಅನುಮತಿಯಲ್ಲಿ ವಿನಾಯಿತಿ ನೀಡಿದೆ. ಜೊತೆಗೆ ಭಾರತೀಯ ಹಡಗುಗಳೂ ಈ ಸಾಮಗ್ರಿಗಳನ್ನು ಮುಕ್ತವಾಗಿ ಸಾಗಿಸಬಹುದು. ಸಾಗರಮಾಲಾ ಯೋಜನೆ ಅಡಿಯಲ್ಲಿ ಮೀನುಗಾರಿಕೆ ಮತ್ತು ಮೀನು ಸಂಸ್ಕರಣೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಸಾಮಾನ್ಯವಾಗಿ ಈಗ ಭಾರತದ ಮೀನುಗಳನ್ನು ಸಿಂಗಾಪುರದಲ್ಲಿ ಸಂಸ್ಕರಿಸಿ ಜಪಾನ್ನಂಥ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಇದರಿಂದಾಗಿ ರೈತರ ಸರಕು ಸಾಗಣೆ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಹಡಗುಗಳಲ್ಲಿ ಸಾಮಗ್ರಿಗಳನ್ನು ಸಾಗಿಸುವಾಗ ಬಂದರು ಪ್ರಧಾನ ನಿರ್ದೇಶಕರಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಸಂಕೀರ್ಣವಾದ್ದರಿಂದ ಸಕಾಲದಲ್ಲಿ ಸರಕು ಸಾಗಣೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಜಲ ಸಾರಿಗೆಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರಕಾರ, ಬಂದರುಗಳ ಅಭಿವೃದ್ಧಿಗೆ 14 ಲಕ್ಷ ಕೋಟಿ ರೂ. ಯೋಜನೆಯಾದ ಸಾಗರಮಾಲಾಗೆ ಹೆಚ್ಚಿನ ಒತ್ತು ನೀಡಿದೆ. ರಸ್ತೆ, ರೈಲು ಮಾರ್ಗದಲ್ಲಿನ ಸರಕು ಸಾಗಣೆಗೆ ಹೋಲಿಸಿದರೆ, ಜಲ ಮಾರ್ಗ ದಲ್ಲಿ ಸರಕು ಸಾಗಣೆಯ ವೆಚ್ಚ ಕಡಿಮೆ ಇದೆ. ಇದು ರೈತರಿಗೆ ನೆರವಾಗಲಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದು ದಕ್ಷಿಣ ಭಾರತದ ಜವುಳಿ ಉದ್ಯಮಕ್ಕೆ ಅನುಕೂಲವಾಗಲಿದ್ದು, ಸದ್ಯ ಗುಜರಾತ್ನಿಂದ ರಸ್ತೆ ಮೂಲಕ ಹತ್ತಿ ಸಾಗಿಸಲಾಗುತ್ತದೆ. ಇದರ ವೆಚ್ಚ ಹೆಚ್ಚಿರುವು ದರಿಂದಾಗಿ ಹಲವು ಬಾರಿ ತಾಂಜಾನಿ ಯಾದಿಂದ ಜಲ ಮಾರ್ಗದ ಮೂಲಕ ಆಮದು ಮಾಡಿ ಕೊಳ್ಳಲಾಗುತ್ತದೆ. ಗುಜರಾ ತ್ನಿಂದ ಜಲ ಸಾರಿಗೆ ಮೂಲಕ ಹತ್ತಿ ಸಾಗಿಸಿದರೆ ವೆಚ್ಚ ಇನ್ನೂ ಕಡಿಮೆಯಾಗಲಿದೆ.