ವರ್ಷಾಂತ್ಯ ಮಹಾ ಚುನಾವಣೆ, ಬೇಗನೆ ತೃತೀಯ ರಂಗ: ದೇವೇಗೌಡ ಆಶಯ
Team Udayavani, Jun 28, 2018, 4:38 PM IST
ಹೊಸದಿಲ್ಲಿ : ಲೋಕಸಭಾ ಚುನಾವಣೆಯನ್ನು ಈ ವರ್ಷ ನವೆಂಬರ್ – ಡಿಸೆಂಬರ್ನಲ್ಲೇ ನಡೆಸುವ ಸೂಚನೆಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದ ಸಿಗುತ್ತಿವೆ; ಬಿಜೆಪಿಯನ್ನು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಎದುರಿಸುವ ನಿಟ್ಟಿನಲ್ಲಿ ಆದಷ್ಟು ಬೇಗನೆ ತೃತೀಯ ರಂಗದ ರಚನೆ ಆಗಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡ ಇಂದಿಲ್ಲಿ ಹೇಳಿದರು.
ಕರ್ನಾಟಕದಲ್ಲಿನ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ ಪಕ್ಷಗಳೆಲ್ಲವೂ ಲೋಕಸಭಾ ಚುನಾವಣೆಯನ್ನು ಒಗ್ಗೂಡಿ ಹೋರಾಡುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ದೇವೇಗೌಡ ಹೇಳಿದರು.
ಈಗಿನ್ನು ನಡೆಯಲಿರುವ ಮುಂಗಾರು ಅಧಿವೇಶನವೇ ಹಾಲಿ ಲೋಕಸಭೆಯ ಕೊನೇ ಅಧಿವೇಶನವಾದೀತು ಎಂದವರು ಹೇಳಿದರು.
ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್, ಟಿಎಂಸಿ, ಬಿಎಸ್ಪಿ, ಎಎಪಿ, ಸಿಪಿಐಎಂ ಮತ್ತು ಟಿಡಿಪಿ ಪಕ್ಷದ ಉನ್ನತ ನಾಯಕರು ಪಾಲ್ಗೊಂಡಿದ್ದರು.
ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳಲ್ಲಿ ತಲಾ 40 ಸ್ಥಾನಗಳನ್ನು ಎಸ್ಪಿ ಮತ್ತು ಬಿಎಸ್ಪಿ ಹಂಚಿಕೊಳ್ಳಲು ಈಗಾಗಲೇ ನಿರ್ಧರಿಸಿವೆ ಎಂದು ದೇವೇಗೌಡ ಹೇಳಿದರು.
“ಕರ್ನಾಟಕದಲ್ಲಿ ನಮಗೆ ಕೆಲವೊಂದು ಸಣ್ಣ ವಿಷಯಗಳಲ್ಲಿ ಸಮಸ್ಯೆ ಇರುವ ಹೊರತಾಗಿಯೂ ನಾವು ಕಾಂಗ್ರೆಸ್ ಜತೆಗೂಡಿ ಲೋಕಸಭಾ ಚುನಾವಣೆಗಳನ್ನು ಹೋರಾಡಲಿದ್ದೇವೆ’ ಎಂದು ಹೇಳಿದ ದೇವೇ ಗೌಡರು, “ಕರ್ನಾಟಕದಲ್ಲಿನ ಸಮ್ಮಿಶ್ರ ಸರಕಾರ ಒಂದು ವರ್ಷ ಮಾತ್ರವೇ ಬಾಳಬಲ್ಲುದು’ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ನೀಡಿರುವ ಹೇಳಿಕೆ “ಅವರ ಅನ್ನಿಸಿಕೆಯಾಗಿದೆ” ಎಂದಷ್ಟೇ ಉತ್ತರಿಸಿದರು.
ಕರ್ನಾಟಕದ 28 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ 10ರಲ್ಲೂ ಜೆಡಿಎಸ್ 18ರಲ್ಲೂ ಸ್ಪರ್ಧಿಸುವ ಸಾಧ್ಯತೆ ಇದೆ; ಆದರೆ ಅಧಿಕೃತ ಸೀಟು ಹಂಚಿಕೆ ಮಾತುಕತೆಗಳು ಇನ್ನೂ ನಡೆದಿಲ್ಲ ಎಂದು ದೇವೇಗೌಡ ಹೇಳಿದರು. ಮುಂದಿನ ದಿನಗಳಲ್ಲಿ ತಾನು ಎನ್ಡಿಎ ಹೊರತಾದ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗುವುದಾಗಿ ಜೆಡಿಎಸ್ ನಾಯಕ ಹೇಳಿದರು.