ಅತಿಥಿ ಉಪನ್ಯಾಸಕರ ನೇಮಕ ರದ್ದು ಮಾಡಿ
Team Udayavani, Mar 6, 2017, 3:45 AM IST
ಹೊಸದಿಲ್ಲಿ: ಕರ್ನಾಟಕ ಸಹಿತ ದೇಶದ ವಿಶ್ವವಿದ್ಯಾನಿಲಯಗಳಲ್ಲಿರುವ ತಾತ್ಕಾಲಿಕ ಮತ್ತು ಅತಿಥಿ ಉಪನ್ಯಾಸಕರ ನೇಮಕ ರದ್ದು ಮಾಡುವಂತೆ ಯುಜಿಸಿ ನೇಮಿಸಿದ್ದ ಆಯೋಗದ ಸದಸ್ಯ ವಿ.ಎಸ್. ಚೌಹಾಣ್ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ.
ಪೂರ್ಣ ಪ್ರಮಾಣದ ಉಪನ್ಯಾಸಕರನ್ನು ನೇಮಕ ಮಾಡಿದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯವಿದೆ. ತಾತ್ಕಾಲಿಕ ಉಪನ್ಯಾಸಕರು ಪದೇ ಪದೇ ಕಾಲೇಜುಗಳನ್ನು ಬದಲು ಮಾಡುವುದರಿಂದ ವಿದ್ಯಾರ್ಥಿಗಳಿಗೂ ಅನನುಕೂಲವಾಗುತ್ತದೆ.
ಕೆಲವೊಂದು ವಿಷಯಗಳಿಗೆ ಪರಿಣತಿ ಇಲ್ಲದಿದ್ದರೆ ಪಾಠ ಮಾಡಲು ಅನನುಕೂಲವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಒಂದು ವೇಳೆ ವಿಶ್ವವಿದ್ಯಾನಿಲಯದ ಧನ ಸಹಾಯ ಆಯೋಗ(ಯುಜಿಸಿ)ದ ಶಿಫಾರಸುಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಒಪ್ಪಿಕೊಂಡದ್ದೇ ಆದಲ್ಲಿ, ರಾಜ್ಯದಲ್ಲಿರುವ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಕೇವಲ ಅತಿಥಿ ಉಪನ್ಯಾಸಕರ ನೇಮಕ ರದ್ದತಿಯಷ್ಟೇ ಅಲ್ಲ, ಪ್ರಾಧ್ಯಾಪಕರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಸಮಾನವಾಗಿ ವೇತನ ಇರಬೇಕೆಂದೂ ಹೇಳಿದೆ. ಈ ಮಧ್ಯೆ ಕೇಂದ್ರೀಯ ವಿವಿಗಳಲ್ಲಿ ನೇಮಕ ಆಗಬೇಕೆಂದುಕೊಂಡವರಿಗೂ ಸಂತಸದ ಸುದ್ದಿಯನ್ನೇ ನೀಡಿದೆ. ಯುಜಿಸಿ ಅನುದಾನ ಇರುವ ಕೇಂದ್ರೀಯ ವಿವಿಗಳಲ್ಲಿರುವ ಒಟ್ಟು 17,006 ಹುದ್ದೆಗಳ ಪೈಕಿ 6,080 ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ ದೆಹಲಿ ವಿವಿಯಲ್ಲಿಯೇ 911 ಹುದ್ದೆಗಳಿವೆ. ಇವುಗಳನ್ನು ತುಂಬುವಂತೆಯೂ ಹೇಳಿದೆ.
ಪ್ರಮುಖ ಶಿಫಾರಸುಗಳು
– ಉನ್ನತ ಶಿಕ್ಷಣ ಸಂಸ್ಥೆಗಳು ಸೂಕ್ತ ನಾಯಕತ್ವ ಇಲ್ಲದೆ ಇರಬಾರದು.
– ಎನ್ಇಟಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದವರನ್ನು ಅಸೆಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಪರಿಗಣಿಸಬೇಕು.
– ಉತ್ತಮ ಬೋಧನಾ ಕೌಶಲ ಹೊಂದಿದವರನ್ನು ನೇರವಾಗಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳಿಗೆ ಪರಿಗಣಿಸಬೇಕು.
– ಶೈಕ್ಷಣಿಕ ಸಂಸ್ಥೆಯ ಗಾತ್ರ ನೋಡಿಕೊಂಡು ಪ್ರಾಂಶುಪಾಲ-1, ಪ್ರಾಂಶುಪಾಲ-2 ಹುದ್ದೆ ಸೃಷ್ಟಿಸಬೇಕು.
– ಉನ್ನತ ಶಿಕ್ಷಣ ಸಂಸ್ಥೆಗಳ ವ್ಯಾಜ್ಯ ಪರಿಹಾರಕ್ಕೆ ನ್ಯಾಯಮಂಡಳಿ ನೇಮಕ.
– ರಾಜ್ಯ ಅಥವಾ ಕೇಂದ್ರ ಸರಕಾರದಿಂದ ನೆರವು ಬಯಸುವ ಕಾಲೇಜು, ಶೈಕ್ಷಣಿಕ ಸಂಸ್ಥೆ ನ್ಯಾಕ್ ಅಥವಾ ಯುಜಿಸಿಯಿಂದ ಕನಿಷ್ಠ “ಬಿ’ ಗ್ರೇಡ್ ಮಾನ್ಯತೆ ಪಡೆದಿರಬೇಕು.