ಮೋದಿ ನಾಡಿನಲ್ಲಿ 2 ಹಂತ ಚುನಾವಣೆ
Team Udayavani, Oct 26, 2017, 6:40 AM IST
ಹೊಸದಿಲ್ಲಿ/ಅಹ್ಮದಾಬಾದ್: ಅಂತೂ ಹಲವಾರು ವಿವಾದಗಳ ಬಳಿಕ ಗುಜರಾತ್ ವಿಧಾನಸಭೆ ಚುನಾವಣೆ
ದಿನಾಂಕ ಪ್ರಕಟವಾಗಿದೆ.
ಡಿ. 9 ಮತ್ತು ಡಿ. 14ರಂದು ಎರಡು ಹಂತಗಳಲ್ಲಿ ಮತದಾನ ನಡೆದರೆ, ಡಿ. 18ಕ್ಕೆ ಫಲಿ ತಾಂಶ ಪ್ರಕಟವಾಗಲಿದೆ. ತತ್ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಪ್ರಕಟಿಸಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಅ. 12ರಂದು ಪ್ರಕಟಿಸಲಾಗಿತ್ತು. ಅದೇ ದಿನ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸ ಲಾಗುತ್ತದೆ ಎಂಬ ಊಹೆ ಇತ್ತು. ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ನೆರೆ ಪರಿಹಾರ ಕಾಮಗಾರಿಗಳು ನಡೆಯುತ್ತಿರುವುದರಿಂದ ಈಗಲೇ ದಿನಾಂಕ ಘೋಷಣೆ ಮಾಡ ಬೇಡಿ ಎಂದು ಗುಜರಾತ್ ಸರಕಾರ ಕೇಳಿ ಕೊಂಡಿದ್ದರಿಂದ ಅಂದು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿರಲಿಲ್ಲ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಪಕ್ಷಗಳು, ಚುನಾವಣಾ ಆಯೋಗ ಕೇಂದ್ರ ಸರಕಾರದ ಆಣತಿಯಂತೆ ಕೆಲಸ ಮಾಡುತ್ತಿದೆ ಎಂದು ದೂರಿದ್ದವು.
ಈ ಬಾರಿಯ ಚುನಾವಣೆಯಲ್ಲಿ ಮತದಾನ ದೃಢೀಕರಣ ವ್ಯವಸ್ಥೆ (ವಿವಿಪ್ಯಾಟ್) ಅಳವಡಿಸಲಾಗುತ್ತದೆ. ಹೀಗಾಗಿ ಮತದಾನ ಮಾಡಲಿರುವವರು ಯಾರಿಗೆ ತಮ್ಮ ಮತ ಚಲಾವಣೆಯಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಬಹುದು.
ಗುಜರಾತ್ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತವರು ರಾಜ್ಯವಾಗಿದ್ದು, ಇಲ್ಲಿನ ಗೆಲುವು ಹಾಗೂ ಸೋಲು ಅವರಿಗೆ ಅತ್ಯಂತ ಮಹತ್ವ ದ್ದಾಗಿರಲಿದೆ. ಇದೇ ವೇಳೆ ಕಾಂಗ್ರೆಸ್ಗೂ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಪಕ್ಷದ ಅಧ್ಯಕ್ಷರಾಗಿ ನೇಮಕವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಗೆ ಇದು ಅತ್ಯಂತ ಮಹತ್ವದ್ದು. ಈಗಾಗಲೇ ರಾಹುಲ್ ನೇತೃತ್ವ ದಲ್ಲಿ ಎದುರಿಸಿದ ಚುನಾವಣೆಗಳಲ್ಲಿ ಕಂಡ ಹೀನಾಯ ಸೋಲನ್ನು ಮೆಟ್ಟಿ ನಿಲ್ಲಲು ಈ ಚುನಾವಣೆಯಲ್ಲಿ ಸಾಧ್ಯವಾಗುತ್ತದೆಯೇ ಎಂಬುದು ಕಾಂಗ್ರೆಸ್ ಬಗ್ಗೆ ಅತ್ಯಂತ ಕುತೂಹಲದ ಸಂಗತಿಯಾಗಿದೆ.
ಪ್ರತಿಭಟನೆಯ ಸವಾಲು: ಬಿಜೆಪಿ ಬೆಂಬಲದ ಪ್ರಮುಖ ಭಾಗವಾದ ಪಟೇಲ್ ಸಮುದಾಯ ಕಳೆದ ಕೆಲವು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಪ್ರತಿಭಟನೆಯ ರೂವಾರಿ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರುವ ಸನ್ನಾಹದಲ್ಲಿದ್ದಾರೆ. ಇನ್ನೊಂದೆಡೆ ಬಿಜೆಪಿಗೆ ರಾಜ್ಯದಲ್ಲಿ ಪ್ರಮುಖ ಮುಖಂಡರ ಕೊರತೆಯಿದೆ. ಹೀಗಾಗಿ ಮೋದಿ ಹೆಸರಿನಲ್ಲೇ ಚುನಾವಣೆ ಕಣಕ್ಕಿಳಿಯಲಾಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಚುನಾವಣೆಗೂ ಮುನ್ನ ಭಾರಿ ಹಿನ್ನಡೆ ಅನುಭವಿಸಿದೆ. ರಾಜ್ಯಾದ್ಯಂತ ಪ್ರಭಾವ ಹೊಂದಿರುವ ಮುಖಂಡರ ಕೊರತೆಯ ಜತೆಗೆ ಪ್ರಮುಖ ಮುಖಂಡ ಶಂಕರಸಿಂಗ್ ವಘೇಲಾ ಕಾಂಗ್ರೆಸ್ ತೊರೆದಿದ್ದು ಭಾರೀ ಹೊಡೆತ ನೀಡಿದೆ. ಇನ್ನೊಂದೆಡೆ ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್ರನ್ನು ಪಕ್ಷಕ್ಕೆ ಸೇರಿಸಿಕೊಂಡು ಈ ಸಮುದಾಯದ ಮತ ಸೆಳೆಯುವ ಯತ್ನ ನಡೆಸಲಾಗಿದೆ.
ಬೇರೆ ಪಕ್ಷದ ಚಿಹ್ನೆಯಡಿ ವಾಘೇಲಾ ಸ್ಪರ್ಧೆ
ಕಾಂಗ್ರೆಸ್ನ ಮಾಜಿ ಮುಖಂಡ ಶಂಕರ್ ಸಿಂಗ್ ವಾಘೇಲಾ ರಾಜಸ್ಥಾನ ಮೂಲ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪಕ್ಷ ಎಲ್ಲ 182 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಆಗಸ್ಟ್ನಲ್ಲಿ ಕಾಂಗ್ರೆಸ್ನಿಂದ ಹೊರಬಂದು ಜನ ವಿಕಲ್ಪ ಪಕ್ಷ ಸ್ಥಾಪಿಸಿರುವ ವಾಘೇಲಾ, ಎಲ್ಲ 182 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದಿದ್ದಾರೆ. ರಾಜಸ್ಥಾನದಲ್ಲಿ ಕಳೆದ ವರ್ಷ ನೋಂದಾಯಿಸಿಕೊಂಡ ಆಲ್ ಇಂಡಿಯಾ ಹಿಂದೂಸ್ತಾನ್ ಕಾಂಗ್ರೆಸ್ ಪಕ್ಷ ಚಿಹ್ನೆಯಡಿ ಕಣಕ್ಕಿಳಿಯಲಿದೆ. ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಚಿಹ್ನೆಗಾಗಿ ನಾವು ಅರ್ಜಿ ಸಲ್ಲಿಸಿದ್ದೆವಾದರೂ, ಅದಾಗಲೇ ತಡವಾಗಿತ್ತು. ಹೀಗಾಗಿ ರಾಜಸ್ಥಾನದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಶಿವಸೇನೆ ಟೀಕೆ: ಗುಜರಾತ್ನಲ್ಲಿ ಬಿಜೆಪಿ ಯಶಸ್ಸು ನಿಜವಾಗಿದ್ದರೆ ಯಾಕೆ ಚುನಾ ವಣೆಗೂ ಕೆಲವೇ ದಿನಗಳಿರುವಾಗ ಜನಪ್ರಿಯ ಯೋಜನೆಗಳನ್ನೂ ಘೋಷಿಸಲಾಗಿದೆ ಎಂದು ಶಿವಸೇನೆ ಟೀಕಿಸಿದೆ.