ಹಲ್ದ್ವಾನಿ ತೆರವಿಗೆ ತಡೆ; 50,000 ಜನರನ್ನು ರಾತ್ರೋರಾತ್ರಿ ಕಳಹಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ
Team Udayavani, Jan 5, 2023, 2:28 PM IST
ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ರೈಲ್ವೇ ಭೂಮಿಯಲ್ಲಿನ ಅತಿಕ್ರಮಣವನ್ನು ತೆಗೆದುಹಾಕುವಂತೆ ಅಧಿಕಾರಿಗಳಿಗೆ ಆದೇಶಿಸಿದ ಉತ್ತರಾಖಂಡ ಹೈಕೋರ್ಟ್ ನ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ತಡೆಹಿಡಿದಿದೆ.
ವಿವಾದಿತ 29 ಎಕರೆ ಪ್ರದೇಶದಲ್ಲಿ ಪ್ರಸ್ತುತ ನಾಲ್ಕು ಸಾವಿರಕ್ಕೂ ಹೆಚ್ಚು ಮನೆಗಳು, ನಾಲ್ಕು ಸರ್ಕಾರಿ ಶಾಲೆಗಳು, 11 ಖಾಸಗಿ ಶಾಲೆಗಳು, ಒಂದು ಬ್ಯಾಂಕ್, 2 ಬೃಹತ್ ನೀರಿನ ಟ್ಯಾಂಕ್ ಗಳು, 10 ಮಸೀದಿ, 4 ದೇಗುಲ, ಹಲವು ವಾಣಿಜ್ಯ ಮಳಿಗೆಗಳು ದಶಕಗಳಿಂದ ಇವೆ. ಹಲ್ದಾನಿ ರೈಲು ನಿಲ್ದಾಣದ ಸಮೀಪದ ಗಫೂರ್ ಬಸ್ತಿ, ಡೋಲಾಕ್ ಬಸ್ತಿ ಮತ್ತು ಇಂದಿರಾ ನಗರ ಪ್ರದೇಶಗಳು ಇದರ ವ್ಯಾಪ್ತಿಗೆ ಬರುತ್ತವೆ. ಸುದೀರ್ಘ ವಿಚಾರಣೆಯ ನಂತರ ಉತ್ತರಾಖಂಡ ಹೈಕೋರ್ಟ್ ಡಿ.20ರಂದು ತೀರ್ಪು ನೀಡಿದ್ದು, ಜ.9ರೊಳಗೆ ತಮಗೆ ಸೇರಿದ ವಸ್ತುಗಳನ್ನು ತೆಗೆದುಕೊಂಡು, ಸ್ಥಳವನ್ನು ತೆರವುಗೊಳಿಸಬೇಕು ಎಂದು ಅಲ್ಲಿನ ನಿವಾಸಿಗಳಿಗೆ ನೋಟಿಸ್ ನೀಡಿತ್ತು.
ಪ್ರಕರಣದ ಮಾನವೀಯ ಅಂಶವನ್ನು ಒತ್ತಿಹೇಳುವ ಸುಪ್ರೀಂ ಕೋರ್ಟ್, ಹಲ್ದ್ವಾನಿಯ ಬನ್ ಭೂಲ್ ಪುರ ಪ್ರದೇಶದಲ್ಲಿ ಅತಿಕ್ರಮಣ ಮಾಡಿದ ರೈಲ್ವೆ ಭೂಮಿಯಿಂದ ಒಕ್ಕಲೆಬ್ಬಿಸುವ ಭೀತಿ ಎದುರಿಸುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದೆ.
”ರೈಲ್ವೆಯಲ್ಲಿ ಸಂಪೂರ್ಣ ಭೂಮಿ ಇದೆಯೇ ಅಥವಾ ಯಾವ ಭೂಮಿ ರಾಜ್ಯಕ್ಕೆ ಸೇರಿದೆ ಎಂಬ ಬಗ್ಗೆ ಸ್ಪಷ್ಟತೆ ಬೇಕು. 50,000 ಜನರನ್ನು ರಾತ್ರೋರಾತ್ರಿ ಹೊರಹಾಕಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.
ನ್ಯಾಯಮೂರ್ತಿ ಎಸ್ಕೆ ಕೌಲ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರನ್ನೊಳಗೊಂಡ ಪೀಠವು ಉತ್ತರಾಖಂಡ ಸರ್ಕಾರ ಮತ್ತು ರೈಲ್ವೆಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಹಸೆಮಣೆ ಏರಲಿದ್ದಾರೆ ಹರಿಪ್ರಿಯಾ- ವಸಿಷ್ಠ ಸಿಂಹ: ಡೇಟ್ ಫಿಕ್ಸ್
“ಸಮಸ್ಯೆಗೆ ಮಾನವೀಯ ಕೋನವಿದೆ, ಈ ಜನರು ಬಗ್ಗೆ ಏನಾದರೂ ಮಾಡಬೇಕಾಗಿದೆ”ಎಂದು ನ್ಯಾಯಮೂರ್ತಿ ಎಸ್ಕೆ ಕೌಲ್ ಹೇಳಿದರು.