ಕಾಂಗ್ರೆಸ್ಗೆ ಹಾರ್ದಿಕ್ ಬೆಂಬಲ
Team Udayavani, Nov 23, 2017, 6:30 AM IST
ಅಹಮದಾಬಾದ್/ಹೊಸದಿಲ್ಲಿ: ಕಾಂಗ್ರೆಸ್ ಮತ್ತು ಪಟೇಲ್ ಮೀಸಲು ಹೋರಾಟ ನಾಯಕ ಹಾರ್ದಿಕ್ ಪಟೇಲ್ ನಡುವಿನ ಮೈತ್ರಿ ಮಾತುಕತೆ ಮುರಿದೇ ಹೋಯಿತು ಎನ್ನುವಷ್ಟರಲ್ಲಿ ಅಚ್ಚರಿಯ ಘೋಷಣೆ ಹೊರಬಿದ್ದಿದೆ. ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಹಾರ್ದಿಕ್ ಬುಧವಾರ ಘೋಷಣೆ ಮಾಡಿದ್ದಾರೆ. ಈ ಮೂಲಕ 22 ವರ್ಷಗಳಿಂದ ಗುಜರಾತ್ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಕೆಳಕ್ಕಿಳಿಸುವುದಾಗಿ ಘೋಷಿಸಿದ್ದಾರೆ.
ಪಟೇಲರಿಗೆ ಮೀಸಲು ನೀಡಿಕೆ ಬಗ್ಗೆ ಕಾಂಗ್ರೆಸ್ ಮತ್ತು ತಮ್ಮ ನಡುವಿನ ಒಪ್ಪಂದದ ವಿವರ ನೀಡಿದ ಅವರು, ಒಬಿಸಿ ಸಮುದಾಯಕ್ಕೆ ಸಮಾನವಾಗಿರುವ ಮೀಸಲು ವ್ಯವಸ್ಥೆಯನ್ನು ನೀಡಲು ಒಪ್ಪಿಕೊಂಡಿದೆ. ವಿಶೇಷ ಕೆಟಗರಿಯಡಿ ಮೀಸಲು ನೀಡುವುದಾಗಿಯೂ, ಪ್ರಣಾಳಿಕೆಯಲ್ಲಿ ಅದನ್ನು ಪ್ರಕಟಿಸುವುದಾಗಿಯೂ ಕಾಂಗ್ರೆಸ್ ಹೇಳಿದೆ ಎಂದಿದ್ದಾರೆ. ಆದರೆ ಹಲವಾರು ಮಂದಿ ಪ್ರಮುಖ ಸಾಂವಿಧಾನಿಕ ತಜ್ಞರು ಇದೊಂದು ಕೇವಲ ಭರವಸೆಯಾಗಿಯೇ ಉಳಿದೀತು. ಜಾರಿಯಾಗಲು ಕಷ್ಟ ಎಂದು ಪ್ರತಿಪಾದಿಸಿದ್ದಾರೆ.
ಈ ನಡೆಯನ್ನು ಟೀಕಿಸಿರುವ ಹಣಕಾಸು ಸಚಿವ ಅರುಣ್ ಜೇಟಿÉ “ಹಾರ್ದಿಕ್-ಕಾಂಗ್ರೆಸ್ ಕ್ಲಬ್’ ಎಂದು ಟೀಕಿಸಿದ್ದಾರೆ. ಇದೇ ವೇಳೆ ರಾಜ್ಕೋಟ್ನಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್, ರಾಹುಲ್ ಗಾಂಧಿ ದೇಗುಲ ಭೇಟಿ ಮೊಘಲ್ ಚಕ್ರವರ್ತಿ ಔರಂಗಜೇಬ್ನಂತಿದೆ. ಆತ ಹಲವು ದೇಗುಲಗಳನ್ನು ನಾಶ ಮಾಡಿದ. ಜನರು ಪ್ರತಿಭಟಿಸಿದಾಗ 2-3 ದೇಗುಲಗಳ ನಿರ್ಮಾಣ ಮಾಡಿದ. ಅಲ್ಲಾವುದ್ದೀನ್ ಖೀಲ್ಜಿ ಕೂಡ ಅದೇ ರೀತಿ ವರ್ತಿಸಿದ್ದ. ರಾಹುಲ್ ಕೂಡ ಆ ದಾರಿಯನ್ನೇ ಹಿಡಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
1,703 ನಾಮಪತ್ರ: ಡಿ.9ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ 1,703 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಒಟ್ಟಾಗಿ 523 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, 392 ಮಂದಿ ಅಭ್ಯರ್ಥಿಗಳು ರಾಜ್ಯಮಟ್ಟದ ಪಕ್ಷಗಳ ಪರವಾಗಿ ಸಲ್ಲಿಸಿದ್ದಾರೆ.