ಸಿಧು ಪಾಕಿಸ್ಥಾನದ ಎಜೆಂಟ್; ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಕಿಡಿ
Team Udayavani, Mar 13, 2019, 1:22 PM IST
ಹೊಸದಿಲ್ಲಿ : ಪಂಜಾಬ್ ಕಾಂಗ್ರೆಸ್ ನಾಯಕ, ಸಚಿವ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ಥಾನದ ಎಜೆಂಟ್ ಎಂದು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಅವರು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಸಿಮ್ರತ್ ಕೌರ್,ಸಿಧು ಹೇಳುವಂತೆ ಅವರ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಾಂಧವ್ಯದಿಂದಾಗಿ ಕರ್ತಾರ್ಪುರ್ ಕಾರಿಡಾರ್ ನಿರ್ಮಾಣವಾಗಿದ್ದಲ್ಲ. ಆ ಕಾಮಗಾರಿಗೆ ಮತ್ತು ಅಭಿವೃದ್ಧಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು ಎಂದರು.
ಗುರುದಾಸ್ಪುರ ಜಿಲ್ಲೆಯ ಡೇರಾ ಬಾಬಾ ನಾನಕ್ನಿಂದ ಅಂತರಾಷ್ಟ್ರೀಯ ಗಡಿ ಮೂಲಕ ಯಾತ್ರಿಕರು ಪಾಕ್ನ ಪಂಜಾಬ್ ಪ್ರಾಂತ್ಯದಲ್ಲಿರುವ ಗುರುದ್ವಾರ ದಾರ್ಬಾರ್ ಸಾಹೀಬ್ ಕರ್ತಾಪುರ್ಗೆ ತೆರಳುವ ಸಲುವಾಗಿ ಕಾಮಗಾರಿಗೆ ನವೆಂಬರ್ 22 ರಂದು ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಸಿಧು ಅವರು ಅಲ್ಲಿಂದ ಕೆಲಸ ಮಾಡಿಸಿರಬಹುದು, ಆದರೆ ನಮ್ಮ ಕ್ಯಾಬಿನೆಟ್ನಿಂದ ಯಾರು ಮಾಡಿದ್ದು ? ಅವರಿಗೆ ಬೇಕಾದುದನ್ನು ಹೇಳಿಕೊಳ್ಳಬಹುದು. ಅವರೊಬ್ಬ ಪಾಕ್ ಎಜೆಂಟ್. ನಿಸ್ಸಂಶಯವಾಗಿ ಪಾಕಿಸ್ಥಾನ ಪರವಾಗಿ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.