ಚೆನ್ನೈನಲ್ಲಿ ನೀರಿಗಾಗಿ ಹವನ
Team Udayavani, Jun 23, 2019, 5:00 AM IST
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ನೀರು ಪೂರೈಕೆಯಲ್ಲೂ ವ್ಯತ್ಯಯವಾಗಿದೆ. ಇದರ ನಡುವೆಯೇ ರಾಜ್ಯ ಸರಕಾರ ಮಳೆಗಾಗಿ ದೇಗುಲಗಳಲ್ಲಿ ಪೂಜೆ, ಹವನಗಳನ್ನು ನಡೆಸಲು ಆದೇಶ ನೀಡಿದೆ. ಅದರಂತೆ, ದೇಗುಲಗಳಲ್ಲಿ ಹವನ ನಡೆಯುತ್ತಿದ್ದರೆ, ವಿಪಕ್ಷ ಡಿಎಂಕೆ ನೀರು ಪೂರೈಸಲು ವಿಫಲವಾಗಿರುವ ಕೆ. ಪಳನಿಸ್ವಾಮಿ ನೇತೃತ್ವದ ಸರಕಾರದ ವಿರುದ್ಧ ಖಾಲಿ ಕೊಡಪಾನ ಪ್ರದರ್ಶಿಸಿ ಪ್ರತಿಭಟನೆ ನಡೆಸಿದೆ.
ಮಳೆಗಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಿರುವಂತೆಯೇ ವಿಪಕ್ಷ ಡಿಎಂಕೆ ನಾಯಕರು ವಿವಿಧ ಸ್ಥಳಗಳಲ್ಲಿ ರಾಜ್ಯದ ಜನರಿಗೆ ಸರಿಯಾದ ರೀತಿಯಲ್ಲಿ ಶುದ್ಧ ಕುಡಿವ ನೀರು ಪೂರೈಸಲು ಎಐಎಡಿಎಂಕೆ ಸರಕಾರ ವಿಫಲವಾಗಿದೆ ಎಂದು ದೂರಿ, ಪ್ರತಿಭಟನೆ ನಡೆಸಿದರು.
ಚೆನ್ನೈನಲ್ಲಿ ಮಾತನಾಡಿದ ಸಚಿವ ಡಿ.ಜಯಕುಮಾರ್, ಯಜ್ಞ ಎನ್ನುವುದು ಧಾರ್ಮಿಕ ನಂಬಿಕೆ. ನಾವು ನಂಬಿದ ದೇವರು ಮಳೆ ಸುರಿಸಲಿದ್ದಾರೆ ಎಂಬ ನಂಬಿಕೆ ನಮ್ಮದು ಎಂದಿದ್ದಾರೆ. ಡಿಎಂಕೆ ನಾಯಕ ಮತ್ತು ಚೆನ್ನೈನ ಮಾಜಿ ಮೇಯರ್ ಮಾ.ಸುಬ್ರಮಣಿಯನ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಏನೂ ಪ್ರಯೋಜನವಿಲ್ಲ. ಅದರ ಬದಲಾಗಿ ನೀರು ಪೂರೈಕೆಗೆ ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ ಎಂದು ಒತ್ತಾಯಿಸಿದ್ದಾರೆ.