ಇವರಿಗೆ ಸಂಗಾತಿಯೂ ಕನಸು
Team Udayavani, Dec 4, 2017, 10:23 AM IST
ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ 1984ರಲ್ಲಿ ನಡೆದ ಯೂನಿಯನ್ ಕಾರ್ಬೈಡ್ ದುರಂತ ಇಂದಿಗೂ ವಿವಿಧ ರೂಪಗಳಲ್ಲಿ ಕಾಡುತ್ತಿದೆ. ಇಲ್ಲಿನ ಸಂತ್ರಸ್ತರಿಗೆ ಈಗ ಜೀವನ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಇಲ್ಲಿನ ಹೆಣ್ಣು ಮಕ್ಕಳನ್ನು ವಿವಾಹವಾಗಲು ಯಾರೂ ಮುಂದೆ ಬರುತ್ತಿಲ್ಲ. ಯೂನಿಯನ್ ಕಾರ್ಬೈಡ್ ಬಾಧಿತ ಕಾಲನಿಗಳಲ್ಲಿ ಮಿಥೈಲ್ ಐಸೊಸೈನೈಡ್ ಸೋರಿಕೆಯಿಂದಾಗಿ ಅಂಗವಿಕಲರಾದ ಯುವಕರಿಗಂತೂ ಸಂಗಾತಿ ಸಿಗುವ ಸಾಧ್ಯತೆಯೇ ಅತ್ಯಂತ ಕಡಿಮೆ. ಆದರೆ ಸಂಬಂಧಿಕರಲ್ಲಿ ಅಥವಾ ಕುಟುಂಬ ದಲ್ಲಿ ಈ ದುರಂತದಿಂದಾಗಿ ಅಂಗವಿಕಲರಾದ ವರಿದ್ದರೆ ಯುವತಿಯರನ್ನು ವಿವಾಹವಾಗಲೂ ಒಪ್ಪುತ್ತಿಲ್ಲ. ಹೀಗಾಗಿ ಈ ಕಾಲೊನಿಗಳಲ್ಲಿ ನೂರಕ್ಕೂ ಹೆಚ್ಚು ಯುವಕ, ಯುವತಿಯರು ಭವಿಷ್ಯವನ್ನೇ ಕಳೆದು ಕೊಂಡಿದ್ದಾರೆ.
ದುರ್ಘಟನೆಯಲ್ಲಿ ಗಂಡನನ್ನು ಕಳೆದು ಕೊಂಡಿರುವ ಚಂಪಾ ದೇವಿ ಈಗ ಅಂಗವಿಕಲ ಮಕ್ಕಳಿಗಾಗಿ ಎನ್ಜಿಒ ನಡೆಸುತ್ತಿದ್ದಾರೆ. ಅವರು ಹೇಳುವಂತೆ, ಸಮಸ್ಯೆ ತಿಳಿದೂ ವಿವಾಹವಾದರೂ ಅನಾರೋಗ್ಯಕ್ಕೊಳಗಾಗುತ್ತಿದ್ದಂತೆ ಹೆಣ್ಣುಮಕ್ಕಳನ್ನು ತವರು ಮನೆಗೆ ಕಳುಹಿಸಲಾಗುತ್ತದೆ. ತನ್ನ ಇಬ್ಬರು ಮಕ್ಕಳೂ ಈಗ ತವರಿಗೆ ಮರಳಿದ್ದಾರೆ ಎಂದಿದ್ದಾರೆ. ಇಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಚಂಪಾ ದೇವಿ ಎನ್ಜಿಒ ಸೂರು ಒದಗಿಸಿದೆ.
ಇನ್ನೂ ಸಿಕ್ಕಿಲ್ಲ ಪರಿಹಾರ: ದುರ್ಘಟನೆ ನಡೆದು 33 ವರ್ಷಗಳೇ ಕಳೆದರೂ ಇಲ್ಲಿನ ಸಂತ್ರಸ್ತರಿಗೆ ಸಾಕಷ್ಟು ಪರಿಹಾರ ಲಭ್ಯವಾಗಿಲ್ಲ. ಇದಕ್ಕಾಗಿ 2010ರಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಇನ್ನೂ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಲಾಗಿದೆ. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಸಂತ್ರಸ್ತರಿಂದ ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.